Wednesday 20 April 2011

ಸವಿ ಸವಿ ನೆನಪು (ಭಾಗ ೨)

ಚಿಕ್ಕಮಂಗಳೂರು ತಲುಪುವಷ್ಟರಲ್ಲಿ ಬೆಳಗಿನ ಜಾವ ಆರು ಗಂಟೆ. ಬೆಂಗಳೂರಿನಲ್ಲಿ ಕಟ್ಟಡಗಳನ್ನಷ್ಟೇ ನೋಡಿ ಬೇಸತ್ತಿದ್ದ ಕಣ್ಣುಗಳಿಗೆ ಇಲ್ಲಿನ ಹಸಿರು ತಂಪು ನೀಡುತ್ತಿದ್ದವು. ಅಮ್ಮ ಹೇಳಿದ್ದು ನಿಜ. ನನಗೇ ದಾರಿ ತಿಳಿಯದಷ್ಟು ಬದಲಾಗಿಹೊಗಿತ್ತು ಈ ಊರು. ಮೇಷ್ಟ್ರ ಮನೆ ತಲುಪಲು ಹರಸಾಹಸ ಮಾಡಿದ್ದೆವು. ಮನೆ ಬದಲಾಗಿತ್ತು. ಚಿಕ್ಕ ಹೆಂಚಿನ ಮನೆ ಹೋಗಿ ದೊಡ್ಡ ಟಾರಸಿ ಮನೆ. ಆದರೆ ಮೇಷ್ಟ್ರು ಮಾತ್ರ ಒಂದು ಚೂರು ಬದಲಾಗಿರಲಿಲ್ಲ. ಅದೇ ಪ್ರೀತಿ, ಅದೇ ಆತ್ಮೀಯತೆ. ನನಗೆ ಏಳನೇ ಕ್ಲಾಸಿನ ವರೆಗೂ ಗಣಿತ ಕಲಿಸಿದ್ದರು. ಅವರ ಮಗ, ಹೆಂಡತಿ ಮಕ್ಕಳ ಜೊತೆ ಅಮೇರಿಕಾದಲ್ಲಿ ಇದ್ದಾನಂತೆ. ಮೇಷ್ಟ್ರ ಹೆಂಡತಿ ಕೊನೆಯ ವರ್ಷ ತೀರಿಕೊಂಡರಂತೆ. ಹಾಗಾದರೆ ಅಷ್ಟು ದೊಡ್ಡ ಮನೆಗೆ ಅವರೊಬ್ಬರೆ?! ಇಲ್ಲ. ಅಡುಗೆ ಮಾಡಲೊಬ್ಬ ಭಟ್ಟ ಇದ್ದಾನೆ. ಪರಿಚಯದವರ ಮಕ್ಕಳನ್ನೆಲ್ಲ ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದಾರೆ. ಮನೆ ಪಾಠ ಹೇಳಿಕೊಡುತ್ತಾರೆ. ಮನೆತುಂಬಾ ಮಕ್ಕಳು. ಈ ಹಳ್ಳಿಗಳ ಮೇಷ್ಟ್ರುಗಳೇ ಹಾಗೆ ನೋಡಿ, ತಮ್ಮಲ್ಲಿ ಕಲಿತು ಹೋದ ಮಕ್ಕಳೆಂದರೆ, ಸ್ವಂತ ಮಕ್ಕಳಿಗಿಂತ ಪ್ರೀತಿ ಜಾಸ್ತಿ. ಸ್ನಾನ, ತಿಂಡಿ ಮುಗಿದ ಮೇಲೆ ಪ್ರಯಾಣದ ಆಯಾಸ ಇದ್ದರೂ ರೆಸ್ಟ್ ತೆಗೆದುಕೊಳ್ಳುಲು ಸಮಯವಿರಲಿಲ್ಲ. ಬಂದ ಕೆಲಸ ಆದರೆ ಸಂಜೆಯೇ ವಾಪಸ್ ಬೆಂಗಳೂರಿಗೆ ಹೋಗುವ ಯೋಚನೆ ಇತ್ತು.

ಜಾಗ ತೋರಿಸಲು ಕರೆದುಕೊಂಡು ಹೋಗಬೇಕಿದ್ದ 'ಬ್ರೋಕರ್' ಗೋಸ್ಕರ ಕಾಯುತ್ತ ಕುಳಿತಿದ್ದೆವು. ಧೀರಜ್ ಗೆ ಹೀಗೊಂದು ಜಾಗ ಇದೆ ಅಂತ ಸುದ್ದಿ ಮುಟ್ಟಿಸಿದವರು, ಈ ಬ್ರೋಕರ್ ನ ಮುಖಾಂತರವೇ ವಿಷಯ ತಿಳಿದವರಂತೆ. ಕಾಯುತ್ತ ಕುಳಿತು ಆಗಲೇ ಅರ್ಧ ಗಂಟೆ ಆಗಿತ್ತು. ಅವನ ಪತ್ತೆಯೇ ಇರಲಿಲ್ಲ. ಧೀರಜ್ ಎರಡು ಸಾರಿ ಪೋನ್ ಮಾಡಿದಾಗಲೂ 'ಬರುತ್ತಿದ್ದೇನೆ ಐದು ನಿಮಿಷ' ಅಂದವನು ಅರ್ಧ ಗಂಟೆಯಾದರೂ ಕಾಣಿಸಲಿಲ್ಲ. ಪ್ರಯಾಣದ ಆಯಾಸ, ಜೊತೆಗೆ ಕಾಯುವಿಕೆ, ಸ್ವಲ್ಪ ಕೋಪವೂ ಬಂದಿತ್ತು. ಕೊನೆಗೂ ಆ ಬ್ರೋಕರ್ ನ ದರ್ಶನವಾಯಿತು.
'ಸಾರಿ, ಸ್ವಲ್ಪ ಲೇಟಾಯಿತು. ತುಂಬಾ ಹೊತ್ತಿನಿಂದ ಕಾಯುತ್ತಿದ್ದಿರೇನೋ' ಅಂತ ನಗು ಮೊಗದಿಂದಲೇ ಮಾತನಾಡಿಸಿದ್ದ.

'ಹಾಗೇನಿಲ್ಲ ಬಿಡಿ' ಎನ್ನದೇ ವಿಧಿ ಇರಲಿಲ್ಲ.

'ತಿಂಡಿ, ಕಾಫಿ ಆಯಿತೋ? ಇಲ್ಲ ಮಾಡಿ ಬಿಡೋಣ ಇಲ್ಲೆ ಹೋಟೆಲ್ಲಿನಲ್ಲಿ' ಎಂದು ತನ್ನ ಸೌಜನ್ಯ ತೋರಿಸಿದ್ದ.

'ಬೇಡ ಎಲ್ಲ ಆಗಿದೆ. ಜಾಗ ತೋರಿಸಿದರೇ...' ಧೀರಜ್ ರಾಗ ಎಳೆದಿದ್ದ.

'ಅದಕ್ಕೆ ಅಲ್ಲವೇ ನೀವು ಅಷ್ಟು ದೂರದಿಂದ ಬಂದಿರುವುದು ಬನ್ನಿ ಹೋಗೋಣ' ಎನ್ನುತ್ತಿದ್ದಂತೆ ನಾವು ಅವನ ಜೊತೆ ಹೊರಟೆವು.

'ನೀವು ಈ ವಾರ ಬಂದಿದ್ದು ಒಳ್ಳೆಯದಾಯಿತು ನೋಡಿ. ಮುಂದಿನ ವಾರ ಬಂದಿದ್ದರೆ ಜಾಗದ ಓನರ್ ನ ಭೇಟಿಯಾಗುವ ಅವಕಾಶವೇ ಸಿಗುತ್ತಿರಲಿಲ್ಲ. ಮುಂದಿನ ವಾರವೇ ಅವರು ಮುಂಬೈಗೆ ಹೊರಟಿದ್ದಾರೆ. ಮತ್ತೆ ಇಲ್ಲಿಗೆ ಬರುವ ಯೋಚನೆ ಇಲ್ಲವಂತೆ ಆ ಕಾರಣಕ್ಕೆ ಮನೆ, ಸುತ್ತಲಿನ ಸ್ವಲ್ಪ ಜಾಗ ಮಾರುತ್ತಿದ್ದಾರೆ. ನೀವೆನೋ ರೆಸಾರ್ಟ್ ಮಾಡಬೇಕು ಎಂದುಕೊಂಡಿದ್ದೀರಂತಲ್ಲ, ಅದಕ್ಕೆ ಸೂಕ್ತವಾದ ಜಾಗ. ಮನೆ ಸ್ವಲ್ಪ ಹಳೆಯದು. ಅದೇ ಜಾಗದಲ್ಲಿ ಬೇರೆ ಮನೆ ಕಟ್ಟಿಸಬಹುದು ಬಿಡಿ.. ನಿಮಗೇನು ಅಲ್ವಾ?'
'ಹೀಗೆ ಹೀಗೆ ಎಡಕ್ಕೆ ಹೋಗಿ' ಎಂದು ದಾರಿ ತೋರಿಸುತ್ತ ಬ್ರೋಕರ್ ಮಾತನಾಡುತ್ತಲೇ ಇದ್ದ.

'ಅಂದ ಹಾಗೆ ನನ್ನ ಹೆಸರು ನಾರಯಣ. ಎಲ್ಲರೂ ನಾಣಿ ಅಂತ ಕರೆಯುವುದು. ಪ್ರೀತಿಯಿಂದ. ನಿಮಗೆಲ್ಲ ಇದು ವಿಚಿತ್ರ ಹೆಸರು ಅನ್ನಿಸಬಹುದು.. ಅದಕ್ಕೆ ಬೆಂಗಳೂರಿನವರು ಬಂದಾಗ ನಾಣಿ ಅಂತ ಕರೆಯಬೇಡಿ ಅಂತ ನಮ್ಮವರಿಗೆಲ್ಲ ಹೇಳಿದ್ದೇನೆ' ಅಂತ ಎಲೆ ಅಡಿಕೆ ಹಾಕಿ ಕೆಂಪಗಾಗಿದ್ದ 32 ಹಲ್ಲುಗಳನ್ನೂ ತೋರಿಸಿ ನಕ್ಕಿದ್ದ. (32 ಹಲ್ಲುಗಳಿರುವುದು ಅಸಂಭವ ಬಿಡಿ!)

ನಾಣಿ ತನ್ನ ಕುಲ, ಗೋತ್ರಗಳನ್ನು ಹೇಳುತ್ತಾ, ನಮ್ಮ ಜಾತಕವನ್ನೂ ಜಾಲಾಡಿದ್ದ. 'ನಿಮಗೆ ಮದುವೆ ಆಗಿದೆಯೋ' ಅನ್ನುವುದರಿಂದ ಹಿಡಿದು, 'ಯಾವ ತರಹದ ಹುಡುಗಿ ಬೇಕು ಹೇಳಿ ಹುಡುಕಿ ಮದುವೆಯನ್ನು ಮಾಡಿಸಿ ಬಿದೋಣ' ಅನ್ನುವವರೆಗೆ ಮಾತನಾಡಿದ್ದ. ಅವನ ಮಾತಿನ ಮಧ್ಯೆಯೇ ನಾವು ನೋಡಬೇಕಿದ್ದ ಜಾಗ ಬಂದು ಬಿಟ್ಟಿತ್ತು.

ಇಷ್ಟು ವರ್ಷಗಳ ನಂತರ ನನ್ನ ಹುಟ್ಟಿದೂರಿಗೆ ಬಂದ ನಾನು ಬಂದು ನಿಂತಿದ್ದು ಮಾತ್ರ, 15 ವರ್ಷಗಳ ಹಿಂದೆ ಸುಮ್ಮನೇ ನೋಡುತ್ತ ಕುಳಿತುಬಿಡುತ್ತಿದ್ದ 'ಆ ಮನೆಯ' ಮುಂದೆ.
ಏನು ಮಾಡಬೇಕೆಂದು ಅರ್ಥವಾಗದೇ ಸುಮ್ಮನೇ ಕುಳಿತುಬಿಟ್ಟಿದ್ದೆ. ಧೀರಜ್ ಮತ್ತು ನಾಣಿ ಆಗಲೇ ಕಾರಿನಿಂದಿಳಿದು ಮನೆಯ ಗೇಟಿನ ಬಳಿ ಹೋಗಿದ್ದರು. 'ಏ ಆಕಾಶ್ ಬಾರೋ' ಧೀರಜ್ ಮತ್ತೊಮ್ಮೆ ಕರೆದಿದ್ದ.

ಊರು ಏಷ್ಟೇ ಬದಲಾಗಿದ್ದರೂ ಆ ಮನೆ ಮಾತ್ರ ಹಾಗೆಯೇ ಇತ್ತು. ಮೊದಲ ಬಾರಿ ಆ ಮನೆಯ ಒಳಕ್ಕೆ ಕಾಲಿರಿಸಿದ್ದೆ. ನಮ್ಮದೇ ವಯಸ್ಸಿನವರೊಬ್ಬರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು.
'ಇವರು ಸಾಗರ್ ಅಂತ ಈ ಮನೆಯ ಮಾಲಿಕರು' ನಾಣಿ ಪರಿಚಯಿಸಿದ್ದ.
ಅಂದರೆ ಸುಮಳ ಮದುವೆ ಆಗಿದ್ದು ಇವರೇನಾ? ಅವಳೂ ಈಗ ಇಲ್ಲೇ ಇದ್ದಾಳ? ನನ್ನ ಯೋಚನೆಗೆ ಕಡಿವಾಣ ಹಾಕುವುದು ಕಷ್ಟವಾಗಿತ್ತು.

ಎಷ್ಟೇ ಬೇಡ ಎಂದರೂ ಕಾಫಿ ಕುಡಿಯಲೇ ಬೇಕು ಎಂದು ಒತ್ತಾಯಿಸಿದ್ದರು ಸಾಗರ್.
'ಅವರೆಲ್ಲ ಬಂದಿದಾರೆ ಕಾಫಿ ಮಾಡಿಬಿಡು' ಅಡುಗೆ ಮನೆಯ ಬಾಗಿಲಲ್ಲಿ ನಿಂತು ಸಾಗರ್ ಹೇಳಿದರೆ, ಓಳಗಡೆಯಿಂದ 'ಹೂಂ' ಎಂಬ ಹೆಣ್ಣು ದನಿ ಕೇಳಿಸಿತ್ತು. ಅದು ಸುಮನ? ಯಾಕೋ ಅಲ್ಲಿ ಕುಳಿತಿರಲು ಕಷ್ಟವಾಯಿತು.
ಧೀರಜ್, ನಾಣಿ ಮತ್ತು ಸಾಗರ್ ಜೊತೆ ಮನೆಯೆಲ್ಲ ನೋಡಿ ಬರಲು ಹೊರಟರೆ ನಾನು 'ಇಲ್ಲೆ ಹೊರಗಡೆ ಇರುತ್ತೇನೆ' ಎನ್ನುತ್ತ ಹಿತ್ತಲಿಗೆ ಬಂದು ನಿಂತಿದ್ದೆ.

ಕೊನೆಗೂ ಜೀವನದಲ್ಲಿ ಮತ್ತೆ ಯಾರನ್ನು ನೋಡಲೇ ಬಾರದು ಅಂದುಕೊಂಡಿದ್ದೆನೋ ಅವರನ್ನು ನೋಡುವ ಸಮಯ ಬಂದಿತ್ತು. ನನ್ನ ಗುರುತು ಸಿಗುತ್ತದಾ ಅವಳಿಗೆ? ಏನಂತ ಮಾತನಾಡಬೇಕು? ಛೆ ಇದೆಂತ ಇಕ್ಕಟ್ಟಿನ ಪರಿಸ್ಥಿತಿ! ಅಂದುಕೊಳ್ಳುತ್ತಿದ್ದಂತೆ ಎಲ್ಲಿಂದಲೋ ಪುಟ್ಟ ಕಾಲ್ಗೆಜ್ಜೆಗಳ ಸದ್ದು ಕೇಳಿದಿತ್ತು. ಇದು ನನ್ನ ಬ್ರಮೆಯಾ? ಇಲ್ಲ. ಮನೆಯ ಕಡೆಯಿಂದ ಯಾರೋ ಬರುತ್ತಿದ್ದರು. ಮನೆಗೆ ಬೆನ್ನುಮಾಡಿ ನಿಂತ ನನಗೆ ತಿರುಗಿ ನೊಡುವ ಧೈರ್ಯ ಬರಲಿಲ್ಲ. ಸುಮಳ ಕಾಲ್ಗೆಜ್ಜೆಗಳ ಸದ್ದಿನಂತಹುದೇ ಪುಟ್ಟ ಕಾಲ್ಗೆಜ್ಜೆಗಳ ಸದ್ದು. ಈಗ ನನ್ನ ಸನಿಹದಲ್ಲೇ ಕೇಳಿಸಿತ್ತು. ಒಂದೆರಡು ಸೆಕೆಂಡುಗಳಲ್ಲೇ 'ಅಂಕಲ್' ಎನ್ನುವ ಮುದ್ದಾದ ಕರೆ ಕೇಳಿಸಿದ್ದೆ ತಿರುಗಿ ನೋಡಿದ್ದೆ. ಪಿಂಕ್ ಕಲರ್ ಫ್ರೊಕ್ ಹಾಕಿರುವ ಪುಟ್ಟ ದೇವತೆ ನಿಂತಿದ್ದಳು.

'ಅಂಕಲ್ ಡ್ಯಾಡಿ ಕರೆರ್ಯುತ್ತೆ. ಬರಬೇಕಂತೆ' ತನ್ನದೇ ಆದ ಮುದ್ದಾದ ಭಾಷೆಯಲ್ಲಿ ಹೇಳಿದ್ದಳು. ಅವಳ ಮುಖ ನೋಡುತ್ತಿದ್ದಂತೆ ಗೊಂದಲ, ತಳಮಳ ಎಲ್ಲ ಹೊರಟುಹೋಗಿ ಮನ ತಿಳಿಯಾದಂತೆ ಅನಿಸಿತು.
'ನಡಿ ಪುಟ್ಟ ಬಂದೆ' ಎನ್ನುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕಿದೆ. ಪುಟ್ಟ ಕಾಲುಗಳ ಕಾಲ್ಗೆಜ್ಜೆಯ ಸದ್ದು ಮಾಡುತ್ತ ಓಡು ನಡುಗೆಯಲ್ಲೇ ನನಗೂ ಮೊದಲೇ ಮನೆ ತಲುಪಿದ ಆ ದೇವತೆ 'ನಾನೇ ಫಸ್ಟ್' ಎಂದು ನನ್ನ ನೋಡಿ ಮುದ್ದಾದ ನಗು ನಕ್ಕಿದ್ದಳು. ತಿಳಿಯಾದ ಮನ ಮುಖದಲ್ಲಿ ಪ್ರಶಾಂತವಾದ ನಗು ತರಿಸಿತು.
'ಏನು ಪುಟ್ಟ ನಿನ್ನ ಹೆಸರು?' ಕೇಳಿದ್ದೆ.
'ಕನಸು' ಮುದ್ದಾಗಿ ಉತ್ತರಿಸಿದ್ದಳು.
ವಾವ್! ಎಷ್ಟು ಸುಂದರವಾದ ಹೆಸರು..

ಒಳಗಡೆ ಹೋಗುತ್ತಿದ್ದಂತೆ ಸಾಗರ್ ಎಲ್ಲರಿಗು ಕಾಫಿ ಕೊಡುತ್ತಿದ್ದರು. ನನಗೂ ಒಂದು ಕಪ್ ಕೊಟ್ಟರು.
'ಸಾಗರ್ ನಿಮ್ಮ ಮಗಳು ತುಂಬಾ ಮುದ್ದಾಗಿದ್ದಾಳೆ. ಅದ್ಭುತವಾದ ಹೆಸರಿಟ್ಟಿದ್ದೀರ' ಎಂದೆ.
ಸಾಗರ್ ಮುಗುಳ್ನಗುತ್ತಾ 'ಅವರಮ್ಮ ಇಟ್ಟ ಹೆಸರು. ಎಲ್ಲ ಅವರಮ್ಮನ ತರಹವೇ' ಎನ್ನುತ್ತಾ, ತೊಡೆಯೇರಿ ಕುಳಿತ ಮಗಳ ಕೆನ್ನೆಗೊಂದು ಮುತ್ತಿಟ್ಟರು.

'ಹಾಡು ಹೇಳೊಕೆ ಬರುತ್ತಾ?' 'ಡಾನ್ಸ್ ಮಾಡ್ತೀಯಾ?' ಧೀರಜ್ ಅವಳಿಗೆ ಪ್ರಶ್ನೆಯ ಸುರಿಮಳೆಯನ್ನೆ ಸುರಿಸುತ್ತಿದ್ದ. ಅವಳ ಮುದ್ದು ಮುದ್ದಾದ ಉತ್ತರಗಳಿಗೆ ಎಲ್ಲರೂ ಮನಸೋತಿದ್ದರು. ನಾನು ಮಾತ್ರ ಅವಳ ಮುಖದಲ್ಲಿ ಸುಮಳನ್ನು ನೋಡುತ್ತಿದ್ದೆ. ಆ ಕಣ್ಣುಗಳು, ತುಟಿಯ ತಿರುವಿನ ಮಚ್ಚೆ ಇವಳಿಗೆ ಅಮ್ಮನಿಂದ ಬಳುವಳಿಯಾಗಿ ಬಂದಿದೆ ಅನ್ನಿಸಿತು. ನಕ್ಕರೆ ಬೆಳದಿಂಗಳೇ ಹರಿದಂತಿತ್ತು.

ಧೀರಜ್ ಗೆ ಮನೆ ಹಿಡಿಸಿತ್ತು. ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದ. ಅದೇ ವಿಷಯವಾಗಿ ಕಾಗದಪತ್ರ, ದುಡ್ಡುಕಾಸಿನ ವಿಚಾರ ಮಾತನಾಡುತ್ತಿದ್ದರು. ನಾನು, ಆ ಪುಟ್ಟ ದೇವತೆಯ ಜೊತೆ ಮಾತಿಗಿಳಿದಿದ್ದೆ. ಅವಳ ಮಾತು, ನಗು, ಕುತೂಹಲ ಬೆರೆತ ಪ್ರಶ್ನೆಗಳು ಸಮಯ ಸರಿದದ್ದೇ ತಿಳಿಯಲಿಲ್ಲ. ಎಷ್ಟೋ ವರ್ಷಗಳ ಬಂಧ ನಮ್ಮಲ್ಲಿದ್ದೆ ಎನ್ನಿಸಿತು.
ಅರ್ಧದಷ್ಟು ವ್ಯವಹಾರ ಮುಗಿದಿತ್ತು. ಇನ್ನು ಉಳಿದಿರುವುದನ್ನು ಮುಂದಿನವಾರದೊಳಗೆ ಮುಗಿಸುತ್ತೇನೆ. ಮುಂದಿನ ವಾರವೇ ಮನೆ ಖಾಲಿ ಮಾಡುತ್ತೇನೆ ಎಂದು ಸಾಗರ್ ಹೇಳಿದರು. ಧೀರಜ್ ಖುಷಿಯಾಗಿದ್ದ. ವಾಪಸ್ ಮೇಷ್ಟ್ರ ಮನೆಗೆ ಹೊರಟೆವು. ಇಲ್ಲ ಅಲ್ಲಿಯವರೆಗೂ ಸುಮ ಹೊರಗಡೆ ಬರಲೇ ಇಲ್ಲ.

ಮೇಷ್ಟ್ರ ಮನೆಯಲ್ಲಿ ಅಂದು ಹಬ್ಬದೂಟ. ಒಬ್ಬಟ್ಟು ಮಾಡಿದ್ದರು. 'ಇದೆಲ್ಲ ಯಾಕೇ ಮಾಡಿಸಿದಿರಿ ಮೇಷ್ಟ್ರೆ' ಎಂದರೆ, 'ಅಪರೂಪಕ್ಕೆ ಬಂದಿದೀರ. ಈ ನಮ್ಮ ಭಟ್ಟರ ಕೈ ಒಬ್ಬಟ್ಟು ತಿಂದರೆ, ಅದರ ರುಚಿ ಆದಷ್ಟು ಬೇಗ ಮತ್ತೆ ನಿಮ್ಮನ್ನು ಇಲ್ಲಿಗೆ ಎಳೆದು ತರುತ್ತದೇನೋ ಅಂತ' ಎಂದು ತಮಾಶೆಯಾಗಿ ಮಾತನಾಡಿದ್ದರು. ನಾಣಿಯೂ ನಮ್ಮ ಜೊತೆಗೆ ಮಾಷ್ಟ್ರ ಮನೆಯಲ್ಲೇ ಉಳಿದಿದ್ದ. ತಮಾಶೆ, ನಗುವಿನ ಮಧ್ಯೆ ಉಟ ಮುಗಿಯಿತು.

ಸ್ವಲ್ಪ ಹೊತ್ತು ರೆಸ್ಟ್ ತೆಗೆದುಕೊಳ್ಳೋಣ ಎಂದರೆ ನಿದ್ದೆ ಹತ್ತಲೇ ಇಲ್ಲ. ಧೀರಜ್ ಆಗಲೇ ನಿದ್ರಾದೇವಿಗೆ ಶರಣಾಗಿದ್ದ. ನನಗೆ ತಲೆಯಲ್ಲಿದ್ದುದ್ದು ಒಂದೇ ಯೋಚನೆ, ಸುಮ ಯಾಕೆ ಮಾತನಾಡಿಸಲು ಹೊರಗೆ ಬರಲಿಲ್ಲ? ಅಂತಹ ತಪ್ಪೇನು ಮಾಡಿದ್ದೆ ನಾನು? ನನ್ನ ಪ್ರಾಶ್ನೆಗಳಿಗೆ ಉತ್ತರ ಸಿಗದೇ ಒದ್ದಾಡಿದ್ದೆ. ಇನ್ನು ಹೀಗೆ ಮಲಗಿರಲು ಸಾಧ್ಯವಿಲ್ಲ ಎಂದು ಎದ್ದು ಹೊರಗಡೆ ಬಂದೆ. ಮೇಷ್ಟ್ರು ಯಾರದೋ ಜೋತೆ ಮಾತನಾಡುತ್ತ ಕುಳಿತಿದ್ದರು. ನನ್ನನ್ನು ನೋಡಿದ ಅವರು ಖುಷಿಯಿಂದ 'ಏಯ್ ಅಕ್ಕಿ ಹೇಗಿದಿಯೋ?' ಆತ್ಮೀಯವಾಗಿ ಮಾತನಾಡಿಸಿದ್ದರು. ನನಗೆ ಆಶ್ಚರ್ಯ.
'ಗುರುತು ಸಿಗಲಿಲ್ಲವ? ನಾನು ಕಣೋ ಪ್ರಕಾಶ' ಅವರು ಹೇಳುತ್ತಿದ್ದಂತೆ ತಟ್ಟನೇ ನೆನಪಾಗಿತ್ತು. ನಮ್ಮದೇ ಕ್ಲಾಸಿನ ಸಣಕಲು ಕಡ್ಡಿ ಪ್ರಕಾಶ. ಅಂದಿಗೂ ಇಂದಿಗೂ ಎಷ್ಟು ವ್ಯತ್ಯಾಸ. ಅಂದಿನ ಸಣಕಲು ಕಡ್ಡಿ, ಇಂದು ದಷ್ಟಪುಷ್ಟ ದೇಹದ ಪೈಲ್ವಾನ್!
'ಏನೋ ಇಷ್ಟೋಂದು ಬದಲಾಗಿದ್ದೀಯ' ಎನ್ನುತ್ತ ಆತ್ಮೀಯವಾಗಿ ತಬ್ಬಿದ್ದೆ.

'ಎಷ್ಟು ವರ್ಷ ಆಯಿತು ಹೇಳು ಬದಲಾಗಲೇ ಬೇಕಲ್ವ' ಎಂದ.

'ನಡೆ ನಮ್ಮ ಮನೆಗೆ ಹೋಗೋಣ. ನೀನು ಬಂದಿದೀಯ ಅಂತ ತಿಳಿತು. ಕರೆದುಕೊಂದು ಹೋಗೋಣ ಅಂತ ಬಂದೆ' ಅಂದ.
ನನಗೂ ಖುಷಿಯಾಗಿತ್ತು. 'ಮೇಷ್ಟ್ರೆ ಧೀರಜ್ ಗೆ ಹೇಳಿಬಿಡಿ' ಎಂದು ಪ್ರಕಾಶನ ಬೈಕ್ ಏರಿ ಅವನ ಮನೆಗೆ ಹೊರಟೆ. ಅವನ ಮನೆ ತಲುಪುವ ಮೊದಲು 'ಊರು ಸುತ್ತೋಣ' ಎಂದಿದ್ದೆ. ನಮ್ಮ ಶಾಲೆ, ನಾವು ಕ್ರಿಕೆಟ್ ಆಡುತ್ತಿದ್ದ ಆ ಬಯಲು.. ಎಷ್ಟೋಂದು ಜಾಗ ಬದಲಾಗಿಹೋಗಿತ್ತು. ನನಗೆ ಗುರುತು ಸಿಗದ ಜಾಗಗಳನ್ನೆಲ್ಲ ಪರಿಚಯಿಸುತ್ತ ನಡೆದಿದ್ದ ಪ್ರಕಾಶ. ಚಿಕ್ಕಂದಿನ ಎಷ್ಟೊ ಘಟನೆಗಳನ್ನ ನೆನಪಿಸಿಕೊಂಡು ನಕ್ಕಿದ್ದೆವು. ನಮ್ಮ ಕ್ಲಾಸಿನಲ್ಲಿದ್ದ ಎಲ್ಲರ ಬಗ್ಗೆ ವಿಚಾರಿಸಿಕೊಂಡಿದ್ದೆ. ಸುಮಳ ಹೊರತಾಗಿ!
ಇಷ್ಟು ವರ್ಷ ಬರಲೇ ಬಾರದು ಅಂತ ದೂರ ಮಾಡಿದ್ದ ನನ್ನ ಹುಟ್ಟೂರು ಇಂದು ನನ್ನದಾಗಿತ್ತು. ಬೆಂಗಳೂರಿನಲ್ಲಿ ಸಿಗದ ಆತ್ಮೀಯತೆ, ಪ್ರೀತಿ, ನೆಮ್ಮದಿ, ಹೇಳಿಕೊಳ್ಳಲಾರದ ನಂಟು ಈ ಊರಲ್ಲಿದೆ ಎನ್ನಿಸಿತು.

ಕೊನೆಗೆ ಅವನೇ ಕೇಳಿದ್ದ 'ಸುಮ ನೆನಪಿದೆಯಲ್ವ ನಿನಗೆ' ಅಂತ.
ಸುಮ್ಮನೇ 'ಹೂಂ' ಎಂದಿದ್ದೆ.
'ಗಂಟೆ ಗಂಟೆಗಳವರೆಗೆ ಅವಳಿಗೊಸ್ಕರ ಕಾದು ಕುಳಿತಿರುತ್ತಿದ್ದೆ ನೆನಪಿದೆಯಾ?' ನಗು ಚಿಮ್ಮಿಸಿದ್ದ.
ಮುಗುಳ್ನಕ್ಕಿದ್ದೆ. ನಾನು ಸುಮಳನ್ನು ಮೆಚ್ಚಿದ್ದೆ ಎನ್ನುವ ವಿಷಯ ತಿಳಿದವನು ಪ್ರಕಾಶನೊಬ್ಬನೇ!
'ಮತ್ತೆ ನೀನು ಬರಲೇ ಇಲ್ಲ ಎಲ್ಲ ಬದಲಾಗಿ ಹೋಯಿತು' ವಿಶಾದವಿದ್ದಂತೆ ಅನ್ನಿಸಿತ್ತು ಅವನ ಮಾತಿನಲ್ಲಿ.
'ಅವರ ಮನೆಯನ್ನೇ ಕೊಂಡುಕೊಳ್ಳುತ್ತಿದ್ದಾರಂತೆ ನಿನ್ನ ಫ್ರೆಂಡ್. ಒಳ್ಳೆಯದಾಯಿತು ಬಿಡು. ಸಾಗರ್ ಗೆ ಅದೊಂದು ಯೋಚನೆಯಾಗಿತ್ತು' ಎಂದು ಸುಮ್ಮನಾಗಿ ಬಿಟ್ಟಿದ್ದ.
ಸುಮಳ ಬಗ್ಗೆ ತಿಳಿಯುವ ತವಕವಿತ್ತು ನನ್ನಲ್ಲಿ. ಆದರೆ ಅದು ಮಾತಾಗಿ ಹೊರಬರಲೇ ಇಲ್ಲ.

ಊರೆಲ್ಲ ಸುತ್ತಿ ಮುಗಿದ ಮೇಲೆ ಪ್ರಕಾಶನ ಮನೆಯ ದಾರಿ ಹಿಡಿದೆವು. ದಾರಿಯುದ್ದಕ್ಕೂ ಪ್ರಕಾಶ ತನ್ನ ಬಗ್ಗೆ ಹೇಳಿಕೊಂಡ.
'ಡಿಗ್ರಿ ಮುಗಿಸುತ್ತಿದ್ದಂತೆ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತು. ಅಪ್ಪ ಮಾಡಿದ ಸ್ವಲ್ಪ ಜಮೀನೂ ಇತ್ತು. ಅಕ್ಕನ ಮದುವೆಯೂ ಆಯಿತು.ಹಳೆ ಮನೆ ಇರುವ ಜಾಗದಲ್ಲೇ ಹೊಸ ಮನೆ ಕಟ್ಟಿಸಿದೆ. ಎಲ್ಲ ಆಯಿತು ಮದುವೆ ಆಗಿಬಿಡು ಅಂತ ಮನೆಯಲ್ಲಿ ಓತ್ತಾಯಿಸಿದ್ರು. ಕೊನೆಯ ವರ್ಷ ಮದುವೆಯೂ ಆಯಿತು. ಒಟ್ಟಿನಲ್ಲಿ ನೆಮ್ಮದಿಯ ಜೀವನ ಕಣೋ' ಎಂದಿದ್ದ. ಆ ನೆಮ್ಮದಿ ಅವನ ಮುಖದಲ್ಲಿ ಕಾಣಿಸುತ್ತಿತ್ತು.
ಕೊನೆಗೂ ಪ್ರಕಾಶನ ಮನೆ ತಲುಪಿದೆವು. ಚಿಕ್ಕದಾದರೂ ಸುಂದರವಾದ ಮನೆ.

'ಅಪ್ಪ ಅಮ್ಮ ಅಕ್ಕನ ಮನೆಗೆ ಹೋಗಿದ್ದಾರೆ. ಇದ್ದರೆ ನಿನ್ನನ್ನು ನೋಡಿ ತುಂಬಾ ಖುಷಿ ಪಡುತ್ತಿದ್ದರು' ಎನ್ನುತ್ತಲೇ ಒಳಗೆ ಬರಮಾಡಿಕೊಂಡಿದ್ದ.
'ನನ್ನ ಚಡ್ಡಿ ದೋಸ್ತು'  ಅಂತ ಹೆಂಡತಿಗೆ ಪರಿಚಯಿಸಿದ್ದ.
ಸಂಗೀತ, ನಗು ಮೊಗದ ತುಂಬಾ ಲಕ್ೞಣವಾದ ಹುಡುಗಿ. ಪ್ರಕಾಶನಿಗೆ ಸರಿಯಾದ ಜೋಡಿ!

'ನೀವು ಸ್ನೆಹಿತರು ಮಾತನಾಡುತ್ತಿರಿ. ತಿಂಡಿ ಟೀ ತಂದು ಬಿಡುತ್ತೇನೆ. ಟೀ ಕುಡಿತೀರ ಅಲ್ವ?' ಅವಳ ಮಾತಿನಲ್ಲಿ 'ತಮ್ಮವರು' ಅನ್ನೋ ಆತ್ಮೀಯತೆ. ಪ್ರಕಾಶನನ್ನು ನೋಡುತ್ತಿದ್ದರೆ ನನ್ನ ಮನದ ಮೂಲೆಯಲ್ಲೆಲ್ಲೋ ಸಣ್ಣ ಅಸೂಯೆ ಕಾಡಿತು. ಅವನ ಮುಖದಲ್ಲಿನ ತೃಪ್ತಿ, ಸಂತೋಷ, ನೆಮ್ಮದಿ ನನ್ನಲ್ಲಿಲ್ಲ!

ನಗು, ಹರಟೆಯ ಮಧ್ಯೆ ಟೀ, ಜೊತೆಗೊಂದಿಷ್ಟು ಕುರುಕಲು ತಿಂಡಿ ಮುಗಿದಿತ್ತು. ಇದರ ಮಧ್ಯೆಯೇ ಧೀರಜ್ ನ ಕಾಲ್ ಬಂದಿತ್ತು. 'ಆಗಲೇ ಐದು ಗಂಟೆ ಕಣೋ ಹೊರಡುವ ಯೋಚನೆ ಇದೆಯೋ ಇಲ್ಲವೋ?' ಎಂದಿದ್ದ.

ಬೆಂಗಳೂರಿಗೆ ವಾಪಸ್ ಹೊರಡಬೇಕಿತ್ತು. ಅಮ್ಮ ಹೇಳಿದ ಗಣೇಶನ ದೇವಸ್ಥಾನದ ನೆನಪಾಯಿತು. 'ಮೊದಲು ದೇವಸ್ಥಾನಕ್ಕೆ ಕರೆದುಕೊಂಡು ಹೋಗಪ್ಪ ಆಮೇಲೆ ಮೇಷ್ಟ್ರ ಮನೆ' ಎಂದಿದ್ದೆ ಪ್ರಕಾಶ್ ಗೆ. 'ಇರೊ ಬಂದೆ, ನಿನಗೆ ಸೇರಬೇಕಾಗಿದ್ದೊಂದು ನನ್ನಲ್ಲೇ ಉಳಿದು ಬಿಟ್ಟಿದೆ' ಎನ್ನುತ್ತ ಓಳಮನೆಗೆ ಹೋಗಿ ಏನೋ ತಂದಿದ್ದ. 'ಎನೋ ಅದು' ಅಂದರೆ, 'ಮೊದಲು ದೇವರ ದರ್ಶನ ಆಮೇಲೆ ಎಲ್ಲ ಮಾತು' ಎಂದಿದ್ದ.

ದೇವರ ದರ್ಶನ ಮಾಡಿ, ಅರ್ಚನೆಯನ್ನು ಮಾಡಿಸಿಕೊಂಡು ದೇವಸ್ಥಾನದ ಹೊರಗಿನ ಕಟ್ಟೆಯಮೇಲೆ ಬಂದು ಕುಳಿತೆವು.

'ಮನೆಯಲ್ಲಿ ಕೊಡುವುದು ಸರಿ ಅನಿಸಲಿಲ್ಲ ಕಣೋ' ಎನ್ನುತ್ತಾ ಪ್ರಕಾಶ್ ಪ್ಯಾಂಟಿನ ಜೇಬಿನಿಂದ ಪುಟ್ಟ ಕವರೊಂದನ್ನು ತೆಗೆದು ನನ್ನ ಕೈಯ್ಯಲ್ಲಿಟ್ಟ. ಕವರಿನ ಮೇಲೆ ಮುದ್ದಾದ ಅಕ್ೞರಗಳಲ್ಲಿ 'ಆಕಾಶ್ ಗೆ' ಅಂತ ಬರೆದಿತ್ತು.

'ಸುಮ ಮದುವೆಗೂ ಮೊದಲು ಒಂದು ದಿನ ಪ್ರಕಾಶಣ್ಣ ಆಕಾಶ್ ಸಿಕ್ಕಿದರೆ ಕೊಟ್ಟುಬಿಡಿ ಅಂತ ಕೊಟ್ಟಿದ್ದಳು' ಎಂದ.
 ನನ್ನ ಹೃದಯ ಬಡಿತ ಜೋರಾಗಿತ್ತು. ಸುಮ ನನಗೆಂದು ಬರೆದ ಪತ್ರ! ಏನೋ ಒಂದು ಸಂಭ್ರಮ.

'ಅವಳು ಇರುವಾಗಲಂತೂ ಇದನ್ನು ನಿನಗೆ ಕೊಡಲು ಆಗಲೇ ಇಲ್ಲ ಈಗಲಾದರೂ....' ಎನ್ನುತ್ತ ಪ್ರಕಾಶ್ ನನ್ನ ಮುಖ ನೋಡಿದ. ಏನು ಅರ್ಥವಾಗದೇ ಅವನ ಮುಖ ದಿಟ್ಟಿಸಿದ್ದೆ.

'ಯಾಕೋ ಹಾಗೆ ನೋಡ್ತೀಯ? ವಿಷಯ ತಿಳಿದಿಲ್ವ? ನಿನ್ನೆಗೆ ಸುಮ ತೀರಿಕೊಂಡು ಎರಡು ವರ್ಷ'

ಒಂದು ಕ್ೞಣ ಎಲ್ಲ ಸ್ಥಬ್ಧವಾಗಿತ್ತು. ಕೈಯ್ಯಲ್ಲಿರುವ ಪತ್ರವನ್ನು ಗಟ್ಟಿಯಾಗಿ ಹಿಡಿದು ಸುಮ್ಮನೇ ಕುಳಿತು ಬಿಟ್ಟೆ. ಪ್ರಕಾಶನಿಗೆ ಎನನ್ನಿಸಿತೋ 'ಪತ್ರ ಓದು. ಮನಸ್ಸು ಹಗುರಾದಮೇಲೆ ಬಾ. ಹೊರಗಡೆ ಕಾದಿರುತ್ತೇನೆ' ಎಂದು ಅಲ್ಲಿಂದ ಎದ್ದು ಹೋಗಿದ್ದ.
'ಸುಮ ಇನ್ನಿಲ್ಲ' ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ವಾಸ್ತವ ಸ್ಥಿತಿಗೆ ತಲುಪಲು ಸ್ವಲ್ಪ ಸಮಯ ಬೇಕಾಯಿತು. ಸುಮಳ ಪತ್ರ ಕೈಯ್ಯಲ್ಲಿತ್ತು. ನಡುಗುವ ಕೈಯ್ಗಳಿಂದ ಪತ್ರ ಬಿಡಿಸಿದ್ದೆ. ಮುದ್ದಾದ ಅಕ್ೞರಗಳಲ್ಲಿ ಸುಮ ಬರೆದದ್ದು ನಾಲ್ಕೇ ನಾಲ್ಕು ಸಾಲು...


ಆಕಾಶ್,
    ನನ್ನ ದಡ್ಡತನವೋ, ಆ ವಯಸ್ಸಿನ ಆಕರ್ಶಣೆಯೋ, ಪ್ರೀತಿಯೋ ನನಗಿನ್ನೂ ತಿಳಿದಿಲ್ಲ. ನಿನ್ನ ನೆನಪಿನ ಜೊತೆಗೇ ಬೆಳೆದುಬಿಟ್ಟೆ. ನಿನ್ನ ದಾರಿ ಕಾದೆ. ಕೊನೆಗೂ ನೀನು ಬರಲೇ ಇಲ್ಲ. ಕಾಯುವಿಕೆಗೆ ಅರ್ಥ ಇಲ್ಲ ಎಂದು ಅರಿವಾಗುವ ಹೊತ್ತಿಗೆ ಹೊಸ ಜೀವನ ಕೈಬೀಸಿ ಕರೆದಿತ್ತು. ಇಷ್ಟು ವರ್ಷ ನಿನ್ನ ಅರಿವಿಗೂ ಬಾರದೆ ನನ್ನ ಕಷ್ಟ, ಸುಖವನ್ನು ಹಂಚಿಕೊಂಡಿದ್ದೀಯ ಅದಕ್ಕೆ ಚಿರಋಣಿ. ಈ ನೆನಪನ್ನು ಇಲ್ಲೆ ಬಿಟ್ಟು ಹೊಸ ಕನಸಿನೆಡೆಗೆ ಹೋಗುತ್ತಿದ್ದೇನೆ. ನೆನೆಪು ಈ ಊರಿಗಷ್ಟೇ ಸೀಮಿತವಾಗಿರಲಿ.
                                                                                                                  ಸುಮ.


ನನ್ನ ಕಣ್ಣಿನಿಂದ ಜಾರಿದ ಬಿಂದುವೊಂದು 'ಸುಮ' ಎನ್ನುವ ಹೆಸರನ್ನು ತೋಯಿಸಿತ್ತು. 'ಸುಮ ನನಗೋಸ್ಕರ ಕಾದಿದ್ದಳು' ಈ ಭಾವವೇ ಮನವನ್ನು ಹಿಂಡಿತು. 'ಇನ್ಯಾವತ್ತೂ ಬರಲ್ವ?' ಹದಿನೈದು ವರ್ಷಗಳ ಹಿಂದೆ ಅವಳು ಕೇಳಿದ ಮಾತು ನನ್ನನ್ನು ಕಾಡಿತ್ತು. ಮನದಲ್ಲಿನ ನೋವುನ್ನು... ಕಣ್ಣಿರನ್ನು ತಡೆಯಲಾರೆದೇ ಹತಾಶನಾಗಿ ಕುಳಿತುಬಿಟ್ಟಿದ್ದೆ.
ಈ ಪತ್ರವನ್ನು ಪ್ರಕಾಶನಿಗೆ ಕೊಟ್ಟ ರೀತಿ ನೋಡಿದರೆ ಇದು ನನ್ನನ್ನು ತಲುಪಲೇ ಬೇಕೆಂಬ ಯಾವ ಉದ್ದೇಶವೂ ಅವಳಿಗಿರಲಿಲ್ಲ ಅಂತ ಸ್ಪಷ್ಟವಾಗಿ ಅರ್ಥವಾಗಿತ್ತು. ತನ್ನ ಮನದ ನೋವನ್ನ ಈ ಮೂಲಕ ಹೊರಕಾಕಿದ್ದಳೇನೋ. ಈ ಸಂಜೆ ಭೀಕರವಾಗಿತ್ತು!

ಎಷ್ಟೋ ಸಮಯದ ನಂತರ ನಾನು ಪ್ರಕಾಶ್ ಇದ್ದಲ್ಲಿ ಬಂದಿದ್ದೆ. ಅವನ ಮುಖದಲ್ಲಿ ದುಗುಡ. 'ಅಕ್ಕಿ...' ಅಂತ ಏನೋ ಹೇಳಲು ಹೊರಟಿದ್ದ. 'ಪ್ರಕಾಶ್ ಮೇಷ್ಟ್ರ ಮನೆಗೆ ಬಿಡು. ಧೀರಜ್ ಕಾಯುತ್ತಿರಬಹುರು ಲೇಟ್ ಆಯ್ತು. ಬೆಂಗಳೂರಿಗೆ ಹೊರಡಬೇಕಲ್ವ' ಎಂದಿದ್ದೆ. ಪ್ರಕಾಶ್ ಮುಂದೇ ಒಂದೂ ಮಾತೂ ಆಡಲಿಲ್ಲ.

ನಾನು ಧೀರಜ್ ಜೊತೆ ಮಾಪಸ್ ಬೆಂಗಳೂರಿಗೆ ಹೊರಟಿದ್ದೆ. ಮೇಷ್ಟ್ರು, ನಾಣಿ, ಪ್ರಕಾಶ್ ಆತ್ಮೀಯವಾಗಿ ಬೀಲ್ಕೊಟ್ಟಿದ್ದರು.
'ಸಾಗರ್ ಅವರ ಮನೆಯ ಹತ್ತಿರ ಹೋಗಿ ಹೋಗೊಣ?' ನಾನು ಧೀರಜ್ ಗೆ ಹೇಳಿದ್ದೆ. ಧೀರಜ್ ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡಿದ್ದ. ನಾನು ನನ್ನ ಪಾಡಿಗೆ ಡ್ರೈವಿಂಗ್ ಮಾಡುತ್ತಿದ್ದೆ.

'ಆ ಮನೆ'ಯ ಮುಂದೆ ಕಾರು ನಿಲ್ಲಿಸಿದೆ. ಸುತ್ತಲಿನ ಕತ್ತಲನ್ನು ಹೊಡದೋಡಿಸುವಂತೆ ಮನೆಯಲ್ಲಿ ಬೆಳಕು ಪ್ರಜ್ವಲಿಸುತ್ತಿತ್ತು. ಗೆಜ್ಜೆಯ ಸದ್ದು, ಜೊತೆಗೆ ಕಿಲ ಕಿಲ ನಗು. ಆ ಪುಟ್ಟ ದೇವತೆಯದು.

ಅಷ್ಟು ಹೊತ್ತಿನಲ್ಲಿ ನನ್ನನ್ನು ಅಲ್ಲಿ ನೋಡಿ ಸಾಗರ್ ಆಶ್ಚರ್ಯ ಪಟ್ಟಿದ್ದರು.

'ಊರಿಗೆ ವಾಪಸ್ ಹೋಗುವ ಮೊದಲು ನಿಮ್ಮ ಮಗಳ ಮುಖವನ್ನೊಮ್ಮೆ ನೋಡಿ ಹೋಗೋಣ ಅನ್ನಿಸಿತು ಸರ್. ಇನ್ನು ಯಾವತ್ತೂ ನೋಡಿತ್ತೇನೋ ಇಲ್ಲವೋ' ಹೇಳುತ್ತಿದ್ದಂತೆ ನನ್ನ ಮಾತು ಗದ್ಗದವಾಗಿತ್ತು. ಸಾಗರ್ ಗೆ ಎಲ್ಲ ಒಗಟಿನಂತೆ ಅನ್ನಿಸಿರಬೇಕು. ನಾನು ಮಾತ್ರ ಆ ಪುಟ್ಟ 'ಕನಸಿ' ನ ಕೆನ್ನೆಗೊಂದು ಮುತ್ತಿಟ್ಟು ಬಿಗಿಯಾಗಿ ತಬ್ಬಿದ್ದೆ. ಕಣ್ಣು ತುಂಬಿ ಬಂದಿತ್ತು. ಮಂಜಾದ ಕಣ್ಣುಗಳಲ್ಲೇ ಆ ಮೆನೆಯನ್ನೊಮ್ಮೆ ದೃಷ್ಟಿಸಿದ್ದೆ. ಸುಮ ಬೆಳೆದ ಮನೆ. ಅವಳ ಗೆಜ್ಜೆಸದ್ದು ಕೇಳಿಸಿತು. ಅವಳು ನನಗೋಸ್ಕರ ಇದೇ ಮನೆಯಲ್ಲಿ ಕಾದಿದ್ದಳು....! ಇನ್ನು ಇಲ್ಲಿರಲಾರೆ ಎನ್ನಿಸಿ ಹೊರಟುಬಿಟ್ಟೆ.

ಆಶ್ಚರ್ಯದಿಂದ ನನ್ನನ್ನೆ ನೋಡುತ್ತಿದ್ದ ಸಾಗರ್ ಗೆ 'ನಿಮ್ಮ ಮಗಳು ದೇವತೆ' ಎಂದಿದ್ದೆ ಮನದ ಮಾತು ಹೊರ ಬಂದಿತ್ತು.
ಸಾಗರ್ ಮುಗುಳ್ನಕ್ಕರು. 'ಡ್ಯಾಡಿ, ಅಂಕಲ್ ಇನ್ನು ಬರಲ್ವಾ?' ಮುದ್ದಾಗಿ ಕೇಳಿದ್ದಳು ಆ ಪುಟ್ಟ ದೇವತೆ. 'ಇನ್ಯಾವತ್ತೂ ಬರಲ್ಲಾ?' ಸುಮಳ ಮಾತು ಮತ್ತೆ ಕಾಡಿತು. ವಿಶಾದದ ನಗು ನಕ್ಕಿದ್ದೆ.

'ಬರ್ತಾರೆ ಪುಟ್ಟ. ಖಂಡಿತ ಬರ್ತಾರೆ. ಈಗ ನೀನವರಿಗೆ ಟಾಟಾ ಮಾಡು' ಸಾಗರ್ ಮಗಳಿಗೆ ಹೇಳುತ್ತಿದ್ದರು. ಮುದ್ದಾದ ನಗು ಚಿಮ್ಮಿಸಿ 'ಟಾಟಾ' ಅಂತ ಕೈ ಬೀಸಿದ್ದಳು. ಸುತ್ತಲೆಲ್ಲ ಬೆಳದಿಂಗಳು ಚೆಲ್ಲಿದಂತಾಯಿತು.

'ಸಾಗರ್ ತುಂಬಾ ಒಳ್ಳೆಯವನು. ಮರುಮದುವೆಯಾಗು ಅಂತ ಎಷ್ಟೇ ಒತ್ತಾಯಿಸಿದರು, ಇಲ್ಲ ನನ್ನ ಜೊತೆ ಸುಮಳ ಕನಸಿದೆ ನನಗಷ್ಟೆ ಸಾಕು ಅಂತ ಹೇಳಿಬಿಟ್ಟಿದ್ದಾನಂತೆ. ಈ ಮನೆಯನ್ನು ಮಾರಲೂ ಇಷ್ಟವಿರಲಿಲ್ಲ ಅವನಿಗೆ. ಆದರೂ ಅನಿವಾರ್ಯ. ನೋಡಿಕೊಳ್ಳಲು ಯಾರೂ ಇರಲಿಲ್ಲವಲ್ಲ' ಮೇಷ್ಟ್ರು ನಾವು ಹೊರಡುವ ಮೊದಲು ಸಾಗರ್ ಬಗ್ಗೆ ಹೇಳುತ್ತಿದ್ದ ಮಾತು ನೆನಪಿಗೆ ಬಂತು.

ಸಾಗರ್ ಕೈಯ್ಯಲ್ಲಿ ಸುಮಳ ಕನಸು ಭದ್ರವಾಗಿತ್ತು...!

ನಮ್ಮ ಕಾರು ಬೆಂಗಳೂರು ದಾರಿ ಹಿಡಿಯಿತು. ಡ್ರೈವಿಂಗ್ ಮಾಡುತ್ತಿದ್ದ ಧೀರಜ್ ಮುಖದಲ್ಲಿ ಗೊಂದಲ ಜೊತೆಗೆ ನೂರಾರು ಪ್ರಶ್ನೆಗಳಿದ್ದವು. ಉತ್ತರಿಸುವ ಶಕ್ತಿ ಈಗ ನನ್ನಲ್ಲಿರಲಿಲ್ಲ. ಸುಮ್ಮನೇ ಕಣ್ಮುಚ್ಚಿ ಕುಳಿತಿದ್ದೆ. ಎಷ್ಟೊ ಹೊತ್ತಿನ ಮೇಲೆ ಒಂದು ನಿರ್ಧಾರಕ್ಕೆ ಬಂದಿದ್ದೆ.

'ಧೀರಜ್ ಆ ಮನೆ ನನಗೆ ಬೇಕು ಕಣೋ'

'ವಾಟ್' ಧೀರಜ್  ಶಾಕ್ ತಗುಲಿದಂತೆ ಚೀರಿದ್ದ.

'ಹೂಂ ಕಣೋ. ನೀನು ಕೊಂಡುಕೊಂಡದ್ದಕ್ಕಿಂತ ಹೆಚ್ಚಿನ ಬೆಲೆ ಕೊಡುತ್ತೇನೆ ನನಗೆ ಕೊಟ್ಟು ಬಿಡು ಪ್ಲೀಸ್' ಗೋಗರೆಯುವಂತೆ ಕೇಳಿದ್ದೆ.

'ಯಾಕೋ ಸಂಜೆಯಿಂದ ವಿಚಿತ್ರವಾಗಿ ಆಡ್ತ ಇದೀಯ? ಏನು ವಿಷಯ? ಅಂತದ್ದೇನಿದೆ ಆ ಮನೆಯಲ್ಲಿ?' ಧೀರಜ್ ನ ಗೊಂದಲ ಕೊನೆಗೂ ಪ್ರಶ್ನೆಯಾಗಿ ಹೊರಬಿತ್ತು.

'ನನ್ನ ನೆನಪಿದೆ' ಚುಟುಕಾಗಿ ಉತ್ತರಿಸಿದ್ದೆ.

ಅರ್ಥವಾಗಲಿಲ್ಲ ಎನ್ನುವಂತೆ ನನ್ನ ಮುಖ ನೋಡಿದ್ದ. ಅವನಿಗೆ ಅರ್ಥಮಾಡಿಸಬೇಕಿತ್ತು. ಅರ್ಥಮಾಡಿಕೊಳ್ಳುತ್ತಾನೆ. 'ಆ ಮನೆ' ನನ್ನದಾಗುತ್ತದೆ ಅನ್ನೊ ನಂಬಿಕೆ ಇತ್ತು.. ಈಗ ಎಂತಹುದೋ ಒಂದು ಸಮಾಧಾನ. ಈ ನನ್ನ ಹುಟ್ಟೂರು ಎಷ್ಟೋ ವರ್ಷಗಳಿಂದ ಗೊಂದಲದಲ್ಲಿದ್ದ ನನ್ನ ಮನಸ್ಸನ್ನ ಶಾಂತವಾಗಿಸಿ ನೆಮ್ಮದಿ ತರಿಸಿತು.

ಕೊನೆಗೆ, ಸುಮ ಬಿಟ್ಟು ಹೋದ ನೆನಪನ್ನು ನಾನು ಆಯ್ದುಕೊಂಡಿದ್ದೆ....!





11 comments:

  1. ಅದ್ಬುತ ವಾದ ಬರವಣಿಗೆ ...... ಹೀಗೆ ಮುಂದುವರೆಸಿ :)

    ReplyDelete
  2. ಹೆಯ್.... its superb yaar.....

    ತುಂಬಾ ಚನ್ನಾಗಿದೆ....
    ನಂಗಂತು ತುಂಬಾ ಇಷ್ಟವಾಯ್ತು..........
    ಹೀಗೇ ಬರೀತಾ ಇರು.... ನಾನು ಓದುತ್ತಾ ಇರುತ್ತೇನೆ.....

    very nice....

    ReplyDelete
  3. abba naanage ffel aaythu dear aft readin da second part....:)
    Cheers 2 U

    ReplyDelete
  4. ಮನ ಮುಟ್ಟುವ ಬರಹ..ನಿರೂಪಣೆ ಮಾಡಿದ ಶೈಲಿ ಸೊಗಸಾಗಿದೆ..ಓದುತ್ತ ಓದುತ್ತ ಕುತೂಹಲ ಹೆಚ್ಚಿಸುತ್ತದೆ
    ಅಂತ್ಯ ಕಣ್ಣೀರು ತರಿಸಿತು :(

    ಹೀಗೆ ವಿವಿಧ ವಿಷಯಗಳ ಬಗ್ಗೆ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಿರಿ..
    ನಿಮಗೆ ಶುಭವಾಗಲಿ!

    ReplyDelete
  5. ದುರಂತ ಅಂತ್ಯ ಮಾಡಲೇಬೇಕು ಎಂದು ಬರೆದ ರೀತಿಯಲ್ಲಿ ಕಥೆ ಬೇಗ ಮುಗಿಯಿತು ಅನಿಸುತ್ತದೆ. ಶೈಲಿ ಮತ್ತು ನಿರೂಪಣೆ ಚೆನ್ನಾಗಿದೆ.

    ReplyDelete
  6. ಪವ್ವಿ,
    idu katheyalla vasthava...

    dhanyavaadagalu...

    ReplyDelete
  7. Nice Blog, Keep it Up !

    K V Kamath
    Udupi

    ReplyDelete
  8. ನೀವೇ ಬರೆದಂತೆ
    ಇದು ಕಥೆಯಲ್ಲದೆ,ವಾಸ್ತವವೇ ಆಗಿರಬಹುದು.
    ಅದರೆ
    ಒಂದು ಸುಂದರವಾದ ಸಾಮಾಜಿಕ ಕಾದಂಬರಿಯಂತೆ
    ಓದಿಸಿಕೊಂಡು ಹೋಗುತ್ತೆ.
    ಮತ್ತೆ ಮತ್ತೆ ಹೇಳ್ತಾಇದ್ದೇನೆ,
    ನಿಮ್ಮ ಶೈಲಿ ಚೆನ್ನಾಗಿದೆ.ಮನ ಮುಟ್ಟುವಂತೆ ಬರೆಯುವ ಕಲೆ ನಿಮಗೆ ಸಿದ್ದಿಸಿದೆ.ಬರೀತಾಇರಿ..
    ನನಗೆ ತುಂಬಾ ಇಷ್ಟವಾಯಿತು.
    ಅಭಿನಂದನೆಗಳು.

    ReplyDelete
  9. ಮೇಡಂ, ಭಾಗ - 2 ಸಹ ತುಂಬಾ ಸೊಗಸಾಗಿದೆ, ನಿರೂಪಣೆ, ಕಥೆಯ ಹಂದರ ಎಲ್ಲವೂ ಮೆಚ್ಚಿಗೆಯಾಯ್ತು. ನಿಮಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು.

    ReplyDelete
  10. ನಿರೂಪಣಾ ಶೈಲಿ ತುಂಬಾನೆ ಚೆನ್ನಾಗಿದೆ....... ಕಣ್ಣಿಗೆ ಕಟ್ಟುವಂತೆ ಬರೆಯುತ್ತಾ ಹೋಗುತ್ತೀರಿ....

    ReplyDelete