Wednesday 20 April 2011

ಸವಿ ಸವಿ ನೆನಪು (ಭಾಗ ೨)

ಚಿಕ್ಕಮಂಗಳೂರು ತಲುಪುವಷ್ಟರಲ್ಲಿ ಬೆಳಗಿನ ಜಾವ ಆರು ಗಂಟೆ. ಬೆಂಗಳೂರಿನಲ್ಲಿ ಕಟ್ಟಡಗಳನ್ನಷ್ಟೇ ನೋಡಿ ಬೇಸತ್ತಿದ್ದ ಕಣ್ಣುಗಳಿಗೆ ಇಲ್ಲಿನ ಹಸಿರು ತಂಪು ನೀಡುತ್ತಿದ್ದವು. ಅಮ್ಮ ಹೇಳಿದ್ದು ನಿಜ. ನನಗೇ ದಾರಿ ತಿಳಿಯದಷ್ಟು ಬದಲಾಗಿಹೊಗಿತ್ತು ಈ ಊರು. ಮೇಷ್ಟ್ರ ಮನೆ ತಲುಪಲು ಹರಸಾಹಸ ಮಾಡಿದ್ದೆವು. ಮನೆ ಬದಲಾಗಿತ್ತು. ಚಿಕ್ಕ ಹೆಂಚಿನ ಮನೆ ಹೋಗಿ ದೊಡ್ಡ ಟಾರಸಿ ಮನೆ. ಆದರೆ ಮೇಷ್ಟ್ರು ಮಾತ್ರ ಒಂದು ಚೂರು ಬದಲಾಗಿರಲಿಲ್ಲ. ಅದೇ ಪ್ರೀತಿ, ಅದೇ ಆತ್ಮೀಯತೆ. ನನಗೆ ಏಳನೇ ಕ್ಲಾಸಿನ ವರೆಗೂ ಗಣಿತ ಕಲಿಸಿದ್ದರು. ಅವರ ಮಗ, ಹೆಂಡತಿ ಮಕ್ಕಳ ಜೊತೆ ಅಮೇರಿಕಾದಲ್ಲಿ ಇದ್ದಾನಂತೆ. ಮೇಷ್ಟ್ರ ಹೆಂಡತಿ ಕೊನೆಯ ವರ್ಷ ತೀರಿಕೊಂಡರಂತೆ. ಹಾಗಾದರೆ ಅಷ್ಟು ದೊಡ್ಡ ಮನೆಗೆ ಅವರೊಬ್ಬರೆ?! ಇಲ್ಲ. ಅಡುಗೆ ಮಾಡಲೊಬ್ಬ ಭಟ್ಟ ಇದ್ದಾನೆ. ಪರಿಚಯದವರ ಮಕ್ಕಳನ್ನೆಲ್ಲ ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದಾರೆ. ಮನೆ ಪಾಠ ಹೇಳಿಕೊಡುತ್ತಾರೆ. ಮನೆತುಂಬಾ ಮಕ್ಕಳು. ಈ ಹಳ್ಳಿಗಳ ಮೇಷ್ಟ್ರುಗಳೇ ಹಾಗೆ ನೋಡಿ, ತಮ್ಮಲ್ಲಿ ಕಲಿತು ಹೋದ ಮಕ್ಕಳೆಂದರೆ, ಸ್ವಂತ ಮಕ್ಕಳಿಗಿಂತ ಪ್ರೀತಿ ಜಾಸ್ತಿ. ಸ್ನಾನ, ತಿಂಡಿ ಮುಗಿದ ಮೇಲೆ ಪ್ರಯಾಣದ ಆಯಾಸ ಇದ್ದರೂ ರೆಸ್ಟ್ ತೆಗೆದುಕೊಳ್ಳುಲು ಸಮಯವಿರಲಿಲ್ಲ. ಬಂದ ಕೆಲಸ ಆದರೆ ಸಂಜೆಯೇ ವಾಪಸ್ ಬೆಂಗಳೂರಿಗೆ ಹೋಗುವ ಯೋಚನೆ ಇತ್ತು.

ಜಾಗ ತೋರಿಸಲು ಕರೆದುಕೊಂಡು ಹೋಗಬೇಕಿದ್ದ 'ಬ್ರೋಕರ್' ಗೋಸ್ಕರ ಕಾಯುತ್ತ ಕುಳಿತಿದ್ದೆವು. ಧೀರಜ್ ಗೆ ಹೀಗೊಂದು ಜಾಗ ಇದೆ ಅಂತ ಸುದ್ದಿ ಮುಟ್ಟಿಸಿದವರು, ಈ ಬ್ರೋಕರ್ ನ ಮುಖಾಂತರವೇ ವಿಷಯ ತಿಳಿದವರಂತೆ. ಕಾಯುತ್ತ ಕುಳಿತು ಆಗಲೇ ಅರ್ಧ ಗಂಟೆ ಆಗಿತ್ತು. ಅವನ ಪತ್ತೆಯೇ ಇರಲಿಲ್ಲ. ಧೀರಜ್ ಎರಡು ಸಾರಿ ಪೋನ್ ಮಾಡಿದಾಗಲೂ 'ಬರುತ್ತಿದ್ದೇನೆ ಐದು ನಿಮಿಷ' ಅಂದವನು ಅರ್ಧ ಗಂಟೆಯಾದರೂ ಕಾಣಿಸಲಿಲ್ಲ. ಪ್ರಯಾಣದ ಆಯಾಸ, ಜೊತೆಗೆ ಕಾಯುವಿಕೆ, ಸ್ವಲ್ಪ ಕೋಪವೂ ಬಂದಿತ್ತು. ಕೊನೆಗೂ ಆ ಬ್ರೋಕರ್ ನ ದರ್ಶನವಾಯಿತು.
'ಸಾರಿ, ಸ್ವಲ್ಪ ಲೇಟಾಯಿತು. ತುಂಬಾ ಹೊತ್ತಿನಿಂದ ಕಾಯುತ್ತಿದ್ದಿರೇನೋ' ಅಂತ ನಗು ಮೊಗದಿಂದಲೇ ಮಾತನಾಡಿಸಿದ್ದ.

'ಹಾಗೇನಿಲ್ಲ ಬಿಡಿ' ಎನ್ನದೇ ವಿಧಿ ಇರಲಿಲ್ಲ.

'ತಿಂಡಿ, ಕಾಫಿ ಆಯಿತೋ? ಇಲ್ಲ ಮಾಡಿ ಬಿಡೋಣ ಇಲ್ಲೆ ಹೋಟೆಲ್ಲಿನಲ್ಲಿ' ಎಂದು ತನ್ನ ಸೌಜನ್ಯ ತೋರಿಸಿದ್ದ.

'ಬೇಡ ಎಲ್ಲ ಆಗಿದೆ. ಜಾಗ ತೋರಿಸಿದರೇ...' ಧೀರಜ್ ರಾಗ ಎಳೆದಿದ್ದ.

'ಅದಕ್ಕೆ ಅಲ್ಲವೇ ನೀವು ಅಷ್ಟು ದೂರದಿಂದ ಬಂದಿರುವುದು ಬನ್ನಿ ಹೋಗೋಣ' ಎನ್ನುತ್ತಿದ್ದಂತೆ ನಾವು ಅವನ ಜೊತೆ ಹೊರಟೆವು.

'ನೀವು ಈ ವಾರ ಬಂದಿದ್ದು ಒಳ್ಳೆಯದಾಯಿತು ನೋಡಿ. ಮುಂದಿನ ವಾರ ಬಂದಿದ್ದರೆ ಜಾಗದ ಓನರ್ ನ ಭೇಟಿಯಾಗುವ ಅವಕಾಶವೇ ಸಿಗುತ್ತಿರಲಿಲ್ಲ. ಮುಂದಿನ ವಾರವೇ ಅವರು ಮುಂಬೈಗೆ ಹೊರಟಿದ್ದಾರೆ. ಮತ್ತೆ ಇಲ್ಲಿಗೆ ಬರುವ ಯೋಚನೆ ಇಲ್ಲವಂತೆ ಆ ಕಾರಣಕ್ಕೆ ಮನೆ, ಸುತ್ತಲಿನ ಸ್ವಲ್ಪ ಜಾಗ ಮಾರುತ್ತಿದ್ದಾರೆ. ನೀವೆನೋ ರೆಸಾರ್ಟ್ ಮಾಡಬೇಕು ಎಂದುಕೊಂಡಿದ್ದೀರಂತಲ್ಲ, ಅದಕ್ಕೆ ಸೂಕ್ತವಾದ ಜಾಗ. ಮನೆ ಸ್ವಲ್ಪ ಹಳೆಯದು. ಅದೇ ಜಾಗದಲ್ಲಿ ಬೇರೆ ಮನೆ ಕಟ್ಟಿಸಬಹುದು ಬಿಡಿ.. ನಿಮಗೇನು ಅಲ್ವಾ?'
'ಹೀಗೆ ಹೀಗೆ ಎಡಕ್ಕೆ ಹೋಗಿ' ಎಂದು ದಾರಿ ತೋರಿಸುತ್ತ ಬ್ರೋಕರ್ ಮಾತನಾಡುತ್ತಲೇ ಇದ್ದ.

'ಅಂದ ಹಾಗೆ ನನ್ನ ಹೆಸರು ನಾರಯಣ. ಎಲ್ಲರೂ ನಾಣಿ ಅಂತ ಕರೆಯುವುದು. ಪ್ರೀತಿಯಿಂದ. ನಿಮಗೆಲ್ಲ ಇದು ವಿಚಿತ್ರ ಹೆಸರು ಅನ್ನಿಸಬಹುದು.. ಅದಕ್ಕೆ ಬೆಂಗಳೂರಿನವರು ಬಂದಾಗ ನಾಣಿ ಅಂತ ಕರೆಯಬೇಡಿ ಅಂತ ನಮ್ಮವರಿಗೆಲ್ಲ ಹೇಳಿದ್ದೇನೆ' ಅಂತ ಎಲೆ ಅಡಿಕೆ ಹಾಕಿ ಕೆಂಪಗಾಗಿದ್ದ 32 ಹಲ್ಲುಗಳನ್ನೂ ತೋರಿಸಿ ನಕ್ಕಿದ್ದ. (32 ಹಲ್ಲುಗಳಿರುವುದು ಅಸಂಭವ ಬಿಡಿ!)

ನಾಣಿ ತನ್ನ ಕುಲ, ಗೋತ್ರಗಳನ್ನು ಹೇಳುತ್ತಾ, ನಮ್ಮ ಜಾತಕವನ್ನೂ ಜಾಲಾಡಿದ್ದ. 'ನಿಮಗೆ ಮದುವೆ ಆಗಿದೆಯೋ' ಅನ್ನುವುದರಿಂದ ಹಿಡಿದು, 'ಯಾವ ತರಹದ ಹುಡುಗಿ ಬೇಕು ಹೇಳಿ ಹುಡುಕಿ ಮದುವೆಯನ್ನು ಮಾಡಿಸಿ ಬಿದೋಣ' ಅನ್ನುವವರೆಗೆ ಮಾತನಾಡಿದ್ದ. ಅವನ ಮಾತಿನ ಮಧ್ಯೆಯೇ ನಾವು ನೋಡಬೇಕಿದ್ದ ಜಾಗ ಬಂದು ಬಿಟ್ಟಿತ್ತು.

ಇಷ್ಟು ವರ್ಷಗಳ ನಂತರ ನನ್ನ ಹುಟ್ಟಿದೂರಿಗೆ ಬಂದ ನಾನು ಬಂದು ನಿಂತಿದ್ದು ಮಾತ್ರ, 15 ವರ್ಷಗಳ ಹಿಂದೆ ಸುಮ್ಮನೇ ನೋಡುತ್ತ ಕುಳಿತುಬಿಡುತ್ತಿದ್ದ 'ಆ ಮನೆಯ' ಮುಂದೆ.
ಏನು ಮಾಡಬೇಕೆಂದು ಅರ್ಥವಾಗದೇ ಸುಮ್ಮನೇ ಕುಳಿತುಬಿಟ್ಟಿದ್ದೆ. ಧೀರಜ್ ಮತ್ತು ನಾಣಿ ಆಗಲೇ ಕಾರಿನಿಂದಿಳಿದು ಮನೆಯ ಗೇಟಿನ ಬಳಿ ಹೋಗಿದ್ದರು. 'ಏ ಆಕಾಶ್ ಬಾರೋ' ಧೀರಜ್ ಮತ್ತೊಮ್ಮೆ ಕರೆದಿದ್ದ.

ಊರು ಏಷ್ಟೇ ಬದಲಾಗಿದ್ದರೂ ಆ ಮನೆ ಮಾತ್ರ ಹಾಗೆಯೇ ಇತ್ತು. ಮೊದಲ ಬಾರಿ ಆ ಮನೆಯ ಒಳಕ್ಕೆ ಕಾಲಿರಿಸಿದ್ದೆ. ನಮ್ಮದೇ ವಯಸ್ಸಿನವರೊಬ್ಬರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು.
'ಇವರು ಸಾಗರ್ ಅಂತ ಈ ಮನೆಯ ಮಾಲಿಕರು' ನಾಣಿ ಪರಿಚಯಿಸಿದ್ದ.
ಅಂದರೆ ಸುಮಳ ಮದುವೆ ಆಗಿದ್ದು ಇವರೇನಾ? ಅವಳೂ ಈಗ ಇಲ್ಲೇ ಇದ್ದಾಳ? ನನ್ನ ಯೋಚನೆಗೆ ಕಡಿವಾಣ ಹಾಕುವುದು ಕಷ್ಟವಾಗಿತ್ತು.

ಎಷ್ಟೇ ಬೇಡ ಎಂದರೂ ಕಾಫಿ ಕುಡಿಯಲೇ ಬೇಕು ಎಂದು ಒತ್ತಾಯಿಸಿದ್ದರು ಸಾಗರ್.
'ಅವರೆಲ್ಲ ಬಂದಿದಾರೆ ಕಾಫಿ ಮಾಡಿಬಿಡು' ಅಡುಗೆ ಮನೆಯ ಬಾಗಿಲಲ್ಲಿ ನಿಂತು ಸಾಗರ್ ಹೇಳಿದರೆ, ಓಳಗಡೆಯಿಂದ 'ಹೂಂ' ಎಂಬ ಹೆಣ್ಣು ದನಿ ಕೇಳಿಸಿತ್ತು. ಅದು ಸುಮನ? ಯಾಕೋ ಅಲ್ಲಿ ಕುಳಿತಿರಲು ಕಷ್ಟವಾಯಿತು.
ಧೀರಜ್, ನಾಣಿ ಮತ್ತು ಸಾಗರ್ ಜೊತೆ ಮನೆಯೆಲ್ಲ ನೋಡಿ ಬರಲು ಹೊರಟರೆ ನಾನು 'ಇಲ್ಲೆ ಹೊರಗಡೆ ಇರುತ್ತೇನೆ' ಎನ್ನುತ್ತ ಹಿತ್ತಲಿಗೆ ಬಂದು ನಿಂತಿದ್ದೆ.

ಕೊನೆಗೂ ಜೀವನದಲ್ಲಿ ಮತ್ತೆ ಯಾರನ್ನು ನೋಡಲೇ ಬಾರದು ಅಂದುಕೊಂಡಿದ್ದೆನೋ ಅವರನ್ನು ನೋಡುವ ಸಮಯ ಬಂದಿತ್ತು. ನನ್ನ ಗುರುತು ಸಿಗುತ್ತದಾ ಅವಳಿಗೆ? ಏನಂತ ಮಾತನಾಡಬೇಕು? ಛೆ ಇದೆಂತ ಇಕ್ಕಟ್ಟಿನ ಪರಿಸ್ಥಿತಿ! ಅಂದುಕೊಳ್ಳುತ್ತಿದ್ದಂತೆ ಎಲ್ಲಿಂದಲೋ ಪುಟ್ಟ ಕಾಲ್ಗೆಜ್ಜೆಗಳ ಸದ್ದು ಕೇಳಿದಿತ್ತು. ಇದು ನನ್ನ ಬ್ರಮೆಯಾ? ಇಲ್ಲ. ಮನೆಯ ಕಡೆಯಿಂದ ಯಾರೋ ಬರುತ್ತಿದ್ದರು. ಮನೆಗೆ ಬೆನ್ನುಮಾಡಿ ನಿಂತ ನನಗೆ ತಿರುಗಿ ನೊಡುವ ಧೈರ್ಯ ಬರಲಿಲ್ಲ. ಸುಮಳ ಕಾಲ್ಗೆಜ್ಜೆಗಳ ಸದ್ದಿನಂತಹುದೇ ಪುಟ್ಟ ಕಾಲ್ಗೆಜ್ಜೆಗಳ ಸದ್ದು. ಈಗ ನನ್ನ ಸನಿಹದಲ್ಲೇ ಕೇಳಿಸಿತ್ತು. ಒಂದೆರಡು ಸೆಕೆಂಡುಗಳಲ್ಲೇ 'ಅಂಕಲ್' ಎನ್ನುವ ಮುದ್ದಾದ ಕರೆ ಕೇಳಿಸಿದ್ದೆ ತಿರುಗಿ ನೋಡಿದ್ದೆ. ಪಿಂಕ್ ಕಲರ್ ಫ್ರೊಕ್ ಹಾಕಿರುವ ಪುಟ್ಟ ದೇವತೆ ನಿಂತಿದ್ದಳು.

'ಅಂಕಲ್ ಡ್ಯಾಡಿ ಕರೆರ್ಯುತ್ತೆ. ಬರಬೇಕಂತೆ' ತನ್ನದೇ ಆದ ಮುದ್ದಾದ ಭಾಷೆಯಲ್ಲಿ ಹೇಳಿದ್ದಳು. ಅವಳ ಮುಖ ನೋಡುತ್ತಿದ್ದಂತೆ ಗೊಂದಲ, ತಳಮಳ ಎಲ್ಲ ಹೊರಟುಹೋಗಿ ಮನ ತಿಳಿಯಾದಂತೆ ಅನಿಸಿತು.
'ನಡಿ ಪುಟ್ಟ ಬಂದೆ' ಎನ್ನುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕಿದೆ. ಪುಟ್ಟ ಕಾಲುಗಳ ಕಾಲ್ಗೆಜ್ಜೆಯ ಸದ್ದು ಮಾಡುತ್ತ ಓಡು ನಡುಗೆಯಲ್ಲೇ ನನಗೂ ಮೊದಲೇ ಮನೆ ತಲುಪಿದ ಆ ದೇವತೆ 'ನಾನೇ ಫಸ್ಟ್' ಎಂದು ನನ್ನ ನೋಡಿ ಮುದ್ದಾದ ನಗು ನಕ್ಕಿದ್ದಳು. ತಿಳಿಯಾದ ಮನ ಮುಖದಲ್ಲಿ ಪ್ರಶಾಂತವಾದ ನಗು ತರಿಸಿತು.
'ಏನು ಪುಟ್ಟ ನಿನ್ನ ಹೆಸರು?' ಕೇಳಿದ್ದೆ.
'ಕನಸು' ಮುದ್ದಾಗಿ ಉತ್ತರಿಸಿದ್ದಳು.
ವಾವ್! ಎಷ್ಟು ಸುಂದರವಾದ ಹೆಸರು..

ಒಳಗಡೆ ಹೋಗುತ್ತಿದ್ದಂತೆ ಸಾಗರ್ ಎಲ್ಲರಿಗು ಕಾಫಿ ಕೊಡುತ್ತಿದ್ದರು. ನನಗೂ ಒಂದು ಕಪ್ ಕೊಟ್ಟರು.
'ಸಾಗರ್ ನಿಮ್ಮ ಮಗಳು ತುಂಬಾ ಮುದ್ದಾಗಿದ್ದಾಳೆ. ಅದ್ಭುತವಾದ ಹೆಸರಿಟ್ಟಿದ್ದೀರ' ಎಂದೆ.
ಸಾಗರ್ ಮುಗುಳ್ನಗುತ್ತಾ 'ಅವರಮ್ಮ ಇಟ್ಟ ಹೆಸರು. ಎಲ್ಲ ಅವರಮ್ಮನ ತರಹವೇ' ಎನ್ನುತ್ತಾ, ತೊಡೆಯೇರಿ ಕುಳಿತ ಮಗಳ ಕೆನ್ನೆಗೊಂದು ಮುತ್ತಿಟ್ಟರು.

'ಹಾಡು ಹೇಳೊಕೆ ಬರುತ್ತಾ?' 'ಡಾನ್ಸ್ ಮಾಡ್ತೀಯಾ?' ಧೀರಜ್ ಅವಳಿಗೆ ಪ್ರಶ್ನೆಯ ಸುರಿಮಳೆಯನ್ನೆ ಸುರಿಸುತ್ತಿದ್ದ. ಅವಳ ಮುದ್ದು ಮುದ್ದಾದ ಉತ್ತರಗಳಿಗೆ ಎಲ್ಲರೂ ಮನಸೋತಿದ್ದರು. ನಾನು ಮಾತ್ರ ಅವಳ ಮುಖದಲ್ಲಿ ಸುಮಳನ್ನು ನೋಡುತ್ತಿದ್ದೆ. ಆ ಕಣ್ಣುಗಳು, ತುಟಿಯ ತಿರುವಿನ ಮಚ್ಚೆ ಇವಳಿಗೆ ಅಮ್ಮನಿಂದ ಬಳುವಳಿಯಾಗಿ ಬಂದಿದೆ ಅನ್ನಿಸಿತು. ನಕ್ಕರೆ ಬೆಳದಿಂಗಳೇ ಹರಿದಂತಿತ್ತು.

ಧೀರಜ್ ಗೆ ಮನೆ ಹಿಡಿಸಿತ್ತು. ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದ. ಅದೇ ವಿಷಯವಾಗಿ ಕಾಗದಪತ್ರ, ದುಡ್ಡುಕಾಸಿನ ವಿಚಾರ ಮಾತನಾಡುತ್ತಿದ್ದರು. ನಾನು, ಆ ಪುಟ್ಟ ದೇವತೆಯ ಜೊತೆ ಮಾತಿಗಿಳಿದಿದ್ದೆ. ಅವಳ ಮಾತು, ನಗು, ಕುತೂಹಲ ಬೆರೆತ ಪ್ರಶ್ನೆಗಳು ಸಮಯ ಸರಿದದ್ದೇ ತಿಳಿಯಲಿಲ್ಲ. ಎಷ್ಟೋ ವರ್ಷಗಳ ಬಂಧ ನಮ್ಮಲ್ಲಿದ್ದೆ ಎನ್ನಿಸಿತು.
ಅರ್ಧದಷ್ಟು ವ್ಯವಹಾರ ಮುಗಿದಿತ್ತು. ಇನ್ನು ಉಳಿದಿರುವುದನ್ನು ಮುಂದಿನವಾರದೊಳಗೆ ಮುಗಿಸುತ್ತೇನೆ. ಮುಂದಿನ ವಾರವೇ ಮನೆ ಖಾಲಿ ಮಾಡುತ್ತೇನೆ ಎಂದು ಸಾಗರ್ ಹೇಳಿದರು. ಧೀರಜ್ ಖುಷಿಯಾಗಿದ್ದ. ವಾಪಸ್ ಮೇಷ್ಟ್ರ ಮನೆಗೆ ಹೊರಟೆವು. ಇಲ್ಲ ಅಲ್ಲಿಯವರೆಗೂ ಸುಮ ಹೊರಗಡೆ ಬರಲೇ ಇಲ್ಲ.

ಮೇಷ್ಟ್ರ ಮನೆಯಲ್ಲಿ ಅಂದು ಹಬ್ಬದೂಟ. ಒಬ್ಬಟ್ಟು ಮಾಡಿದ್ದರು. 'ಇದೆಲ್ಲ ಯಾಕೇ ಮಾಡಿಸಿದಿರಿ ಮೇಷ್ಟ್ರೆ' ಎಂದರೆ, 'ಅಪರೂಪಕ್ಕೆ ಬಂದಿದೀರ. ಈ ನಮ್ಮ ಭಟ್ಟರ ಕೈ ಒಬ್ಬಟ್ಟು ತಿಂದರೆ, ಅದರ ರುಚಿ ಆದಷ್ಟು ಬೇಗ ಮತ್ತೆ ನಿಮ್ಮನ್ನು ಇಲ್ಲಿಗೆ ಎಳೆದು ತರುತ್ತದೇನೋ ಅಂತ' ಎಂದು ತಮಾಶೆಯಾಗಿ ಮಾತನಾಡಿದ್ದರು. ನಾಣಿಯೂ ನಮ್ಮ ಜೊತೆಗೆ ಮಾಷ್ಟ್ರ ಮನೆಯಲ್ಲೇ ಉಳಿದಿದ್ದ. ತಮಾಶೆ, ನಗುವಿನ ಮಧ್ಯೆ ಉಟ ಮುಗಿಯಿತು.

ಸ್ವಲ್ಪ ಹೊತ್ತು ರೆಸ್ಟ್ ತೆಗೆದುಕೊಳ್ಳೋಣ ಎಂದರೆ ನಿದ್ದೆ ಹತ್ತಲೇ ಇಲ್ಲ. ಧೀರಜ್ ಆಗಲೇ ನಿದ್ರಾದೇವಿಗೆ ಶರಣಾಗಿದ್ದ. ನನಗೆ ತಲೆಯಲ್ಲಿದ್ದುದ್ದು ಒಂದೇ ಯೋಚನೆ, ಸುಮ ಯಾಕೆ ಮಾತನಾಡಿಸಲು ಹೊರಗೆ ಬರಲಿಲ್ಲ? ಅಂತಹ ತಪ್ಪೇನು ಮಾಡಿದ್ದೆ ನಾನು? ನನ್ನ ಪ್ರಾಶ್ನೆಗಳಿಗೆ ಉತ್ತರ ಸಿಗದೇ ಒದ್ದಾಡಿದ್ದೆ. ಇನ್ನು ಹೀಗೆ ಮಲಗಿರಲು ಸಾಧ್ಯವಿಲ್ಲ ಎಂದು ಎದ್ದು ಹೊರಗಡೆ ಬಂದೆ. ಮೇಷ್ಟ್ರು ಯಾರದೋ ಜೋತೆ ಮಾತನಾಡುತ್ತ ಕುಳಿತಿದ್ದರು. ನನ್ನನ್ನು ನೋಡಿದ ಅವರು ಖುಷಿಯಿಂದ 'ಏಯ್ ಅಕ್ಕಿ ಹೇಗಿದಿಯೋ?' ಆತ್ಮೀಯವಾಗಿ ಮಾತನಾಡಿಸಿದ್ದರು. ನನಗೆ ಆಶ್ಚರ್ಯ.
'ಗುರುತು ಸಿಗಲಿಲ್ಲವ? ನಾನು ಕಣೋ ಪ್ರಕಾಶ' ಅವರು ಹೇಳುತ್ತಿದ್ದಂತೆ ತಟ್ಟನೇ ನೆನಪಾಗಿತ್ತು. ನಮ್ಮದೇ ಕ್ಲಾಸಿನ ಸಣಕಲು ಕಡ್ಡಿ ಪ್ರಕಾಶ. ಅಂದಿಗೂ ಇಂದಿಗೂ ಎಷ್ಟು ವ್ಯತ್ಯಾಸ. ಅಂದಿನ ಸಣಕಲು ಕಡ್ಡಿ, ಇಂದು ದಷ್ಟಪುಷ್ಟ ದೇಹದ ಪೈಲ್ವಾನ್!
'ಏನೋ ಇಷ್ಟೋಂದು ಬದಲಾಗಿದ್ದೀಯ' ಎನ್ನುತ್ತ ಆತ್ಮೀಯವಾಗಿ ತಬ್ಬಿದ್ದೆ.

'ಎಷ್ಟು ವರ್ಷ ಆಯಿತು ಹೇಳು ಬದಲಾಗಲೇ ಬೇಕಲ್ವ' ಎಂದ.

'ನಡೆ ನಮ್ಮ ಮನೆಗೆ ಹೋಗೋಣ. ನೀನು ಬಂದಿದೀಯ ಅಂತ ತಿಳಿತು. ಕರೆದುಕೊಂದು ಹೋಗೋಣ ಅಂತ ಬಂದೆ' ಅಂದ.
ನನಗೂ ಖುಷಿಯಾಗಿತ್ತು. 'ಮೇಷ್ಟ್ರೆ ಧೀರಜ್ ಗೆ ಹೇಳಿಬಿಡಿ' ಎಂದು ಪ್ರಕಾಶನ ಬೈಕ್ ಏರಿ ಅವನ ಮನೆಗೆ ಹೊರಟೆ. ಅವನ ಮನೆ ತಲುಪುವ ಮೊದಲು 'ಊರು ಸುತ್ತೋಣ' ಎಂದಿದ್ದೆ. ನಮ್ಮ ಶಾಲೆ, ನಾವು ಕ್ರಿಕೆಟ್ ಆಡುತ್ತಿದ್ದ ಆ ಬಯಲು.. ಎಷ್ಟೋಂದು ಜಾಗ ಬದಲಾಗಿಹೋಗಿತ್ತು. ನನಗೆ ಗುರುತು ಸಿಗದ ಜಾಗಗಳನ್ನೆಲ್ಲ ಪರಿಚಯಿಸುತ್ತ ನಡೆದಿದ್ದ ಪ್ರಕಾಶ. ಚಿಕ್ಕಂದಿನ ಎಷ್ಟೊ ಘಟನೆಗಳನ್ನ ನೆನಪಿಸಿಕೊಂಡು ನಕ್ಕಿದ್ದೆವು. ನಮ್ಮ ಕ್ಲಾಸಿನಲ್ಲಿದ್ದ ಎಲ್ಲರ ಬಗ್ಗೆ ವಿಚಾರಿಸಿಕೊಂಡಿದ್ದೆ. ಸುಮಳ ಹೊರತಾಗಿ!
ಇಷ್ಟು ವರ್ಷ ಬರಲೇ ಬಾರದು ಅಂತ ದೂರ ಮಾಡಿದ್ದ ನನ್ನ ಹುಟ್ಟೂರು ಇಂದು ನನ್ನದಾಗಿತ್ತು. ಬೆಂಗಳೂರಿನಲ್ಲಿ ಸಿಗದ ಆತ್ಮೀಯತೆ, ಪ್ರೀತಿ, ನೆಮ್ಮದಿ, ಹೇಳಿಕೊಳ್ಳಲಾರದ ನಂಟು ಈ ಊರಲ್ಲಿದೆ ಎನ್ನಿಸಿತು.

ಕೊನೆಗೆ ಅವನೇ ಕೇಳಿದ್ದ 'ಸುಮ ನೆನಪಿದೆಯಲ್ವ ನಿನಗೆ' ಅಂತ.
ಸುಮ್ಮನೇ 'ಹೂಂ' ಎಂದಿದ್ದೆ.
'ಗಂಟೆ ಗಂಟೆಗಳವರೆಗೆ ಅವಳಿಗೊಸ್ಕರ ಕಾದು ಕುಳಿತಿರುತ್ತಿದ್ದೆ ನೆನಪಿದೆಯಾ?' ನಗು ಚಿಮ್ಮಿಸಿದ್ದ.
ಮುಗುಳ್ನಕ್ಕಿದ್ದೆ. ನಾನು ಸುಮಳನ್ನು ಮೆಚ್ಚಿದ್ದೆ ಎನ್ನುವ ವಿಷಯ ತಿಳಿದವನು ಪ್ರಕಾಶನೊಬ್ಬನೇ!
'ಮತ್ತೆ ನೀನು ಬರಲೇ ಇಲ್ಲ ಎಲ್ಲ ಬದಲಾಗಿ ಹೋಯಿತು' ವಿಶಾದವಿದ್ದಂತೆ ಅನ್ನಿಸಿತ್ತು ಅವನ ಮಾತಿನಲ್ಲಿ.
'ಅವರ ಮನೆಯನ್ನೇ ಕೊಂಡುಕೊಳ್ಳುತ್ತಿದ್ದಾರಂತೆ ನಿನ್ನ ಫ್ರೆಂಡ್. ಒಳ್ಳೆಯದಾಯಿತು ಬಿಡು. ಸಾಗರ್ ಗೆ ಅದೊಂದು ಯೋಚನೆಯಾಗಿತ್ತು' ಎಂದು ಸುಮ್ಮನಾಗಿ ಬಿಟ್ಟಿದ್ದ.
ಸುಮಳ ಬಗ್ಗೆ ತಿಳಿಯುವ ತವಕವಿತ್ತು ನನ್ನಲ್ಲಿ. ಆದರೆ ಅದು ಮಾತಾಗಿ ಹೊರಬರಲೇ ಇಲ್ಲ.

ಊರೆಲ್ಲ ಸುತ್ತಿ ಮುಗಿದ ಮೇಲೆ ಪ್ರಕಾಶನ ಮನೆಯ ದಾರಿ ಹಿಡಿದೆವು. ದಾರಿಯುದ್ದಕ್ಕೂ ಪ್ರಕಾಶ ತನ್ನ ಬಗ್ಗೆ ಹೇಳಿಕೊಂಡ.
'ಡಿಗ್ರಿ ಮುಗಿಸುತ್ತಿದ್ದಂತೆ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತು. ಅಪ್ಪ ಮಾಡಿದ ಸ್ವಲ್ಪ ಜಮೀನೂ ಇತ್ತು. ಅಕ್ಕನ ಮದುವೆಯೂ ಆಯಿತು.ಹಳೆ ಮನೆ ಇರುವ ಜಾಗದಲ್ಲೇ ಹೊಸ ಮನೆ ಕಟ್ಟಿಸಿದೆ. ಎಲ್ಲ ಆಯಿತು ಮದುವೆ ಆಗಿಬಿಡು ಅಂತ ಮನೆಯಲ್ಲಿ ಓತ್ತಾಯಿಸಿದ್ರು. ಕೊನೆಯ ವರ್ಷ ಮದುವೆಯೂ ಆಯಿತು. ಒಟ್ಟಿನಲ್ಲಿ ನೆಮ್ಮದಿಯ ಜೀವನ ಕಣೋ' ಎಂದಿದ್ದ. ಆ ನೆಮ್ಮದಿ ಅವನ ಮುಖದಲ್ಲಿ ಕಾಣಿಸುತ್ತಿತ್ತು.
ಕೊನೆಗೂ ಪ್ರಕಾಶನ ಮನೆ ತಲುಪಿದೆವು. ಚಿಕ್ಕದಾದರೂ ಸುಂದರವಾದ ಮನೆ.

'ಅಪ್ಪ ಅಮ್ಮ ಅಕ್ಕನ ಮನೆಗೆ ಹೋಗಿದ್ದಾರೆ. ಇದ್ದರೆ ನಿನ್ನನ್ನು ನೋಡಿ ತುಂಬಾ ಖುಷಿ ಪಡುತ್ತಿದ್ದರು' ಎನ್ನುತ್ತಲೇ ಒಳಗೆ ಬರಮಾಡಿಕೊಂಡಿದ್ದ.
'ನನ್ನ ಚಡ್ಡಿ ದೋಸ್ತು'  ಅಂತ ಹೆಂಡತಿಗೆ ಪರಿಚಯಿಸಿದ್ದ.
ಸಂಗೀತ, ನಗು ಮೊಗದ ತುಂಬಾ ಲಕ್ೞಣವಾದ ಹುಡುಗಿ. ಪ್ರಕಾಶನಿಗೆ ಸರಿಯಾದ ಜೋಡಿ!

'ನೀವು ಸ್ನೆಹಿತರು ಮಾತನಾಡುತ್ತಿರಿ. ತಿಂಡಿ ಟೀ ತಂದು ಬಿಡುತ್ತೇನೆ. ಟೀ ಕುಡಿತೀರ ಅಲ್ವ?' ಅವಳ ಮಾತಿನಲ್ಲಿ 'ತಮ್ಮವರು' ಅನ್ನೋ ಆತ್ಮೀಯತೆ. ಪ್ರಕಾಶನನ್ನು ನೋಡುತ್ತಿದ್ದರೆ ನನ್ನ ಮನದ ಮೂಲೆಯಲ್ಲೆಲ್ಲೋ ಸಣ್ಣ ಅಸೂಯೆ ಕಾಡಿತು. ಅವನ ಮುಖದಲ್ಲಿನ ತೃಪ್ತಿ, ಸಂತೋಷ, ನೆಮ್ಮದಿ ನನ್ನಲ್ಲಿಲ್ಲ!

ನಗು, ಹರಟೆಯ ಮಧ್ಯೆ ಟೀ, ಜೊತೆಗೊಂದಿಷ್ಟು ಕುರುಕಲು ತಿಂಡಿ ಮುಗಿದಿತ್ತು. ಇದರ ಮಧ್ಯೆಯೇ ಧೀರಜ್ ನ ಕಾಲ್ ಬಂದಿತ್ತು. 'ಆಗಲೇ ಐದು ಗಂಟೆ ಕಣೋ ಹೊರಡುವ ಯೋಚನೆ ಇದೆಯೋ ಇಲ್ಲವೋ?' ಎಂದಿದ್ದ.

ಬೆಂಗಳೂರಿಗೆ ವಾಪಸ್ ಹೊರಡಬೇಕಿತ್ತು. ಅಮ್ಮ ಹೇಳಿದ ಗಣೇಶನ ದೇವಸ್ಥಾನದ ನೆನಪಾಯಿತು. 'ಮೊದಲು ದೇವಸ್ಥಾನಕ್ಕೆ ಕರೆದುಕೊಂಡು ಹೋಗಪ್ಪ ಆಮೇಲೆ ಮೇಷ್ಟ್ರ ಮನೆ' ಎಂದಿದ್ದೆ ಪ್ರಕಾಶ್ ಗೆ. 'ಇರೊ ಬಂದೆ, ನಿನಗೆ ಸೇರಬೇಕಾಗಿದ್ದೊಂದು ನನ್ನಲ್ಲೇ ಉಳಿದು ಬಿಟ್ಟಿದೆ' ಎನ್ನುತ್ತ ಓಳಮನೆಗೆ ಹೋಗಿ ಏನೋ ತಂದಿದ್ದ. 'ಎನೋ ಅದು' ಅಂದರೆ, 'ಮೊದಲು ದೇವರ ದರ್ಶನ ಆಮೇಲೆ ಎಲ್ಲ ಮಾತು' ಎಂದಿದ್ದ.

ದೇವರ ದರ್ಶನ ಮಾಡಿ, ಅರ್ಚನೆಯನ್ನು ಮಾಡಿಸಿಕೊಂಡು ದೇವಸ್ಥಾನದ ಹೊರಗಿನ ಕಟ್ಟೆಯಮೇಲೆ ಬಂದು ಕುಳಿತೆವು.

'ಮನೆಯಲ್ಲಿ ಕೊಡುವುದು ಸರಿ ಅನಿಸಲಿಲ್ಲ ಕಣೋ' ಎನ್ನುತ್ತಾ ಪ್ರಕಾಶ್ ಪ್ಯಾಂಟಿನ ಜೇಬಿನಿಂದ ಪುಟ್ಟ ಕವರೊಂದನ್ನು ತೆಗೆದು ನನ್ನ ಕೈಯ್ಯಲ್ಲಿಟ್ಟ. ಕವರಿನ ಮೇಲೆ ಮುದ್ದಾದ ಅಕ್ೞರಗಳಲ್ಲಿ 'ಆಕಾಶ್ ಗೆ' ಅಂತ ಬರೆದಿತ್ತು.

'ಸುಮ ಮದುವೆಗೂ ಮೊದಲು ಒಂದು ದಿನ ಪ್ರಕಾಶಣ್ಣ ಆಕಾಶ್ ಸಿಕ್ಕಿದರೆ ಕೊಟ್ಟುಬಿಡಿ ಅಂತ ಕೊಟ್ಟಿದ್ದಳು' ಎಂದ.
 ನನ್ನ ಹೃದಯ ಬಡಿತ ಜೋರಾಗಿತ್ತು. ಸುಮ ನನಗೆಂದು ಬರೆದ ಪತ್ರ! ಏನೋ ಒಂದು ಸಂಭ್ರಮ.

'ಅವಳು ಇರುವಾಗಲಂತೂ ಇದನ್ನು ನಿನಗೆ ಕೊಡಲು ಆಗಲೇ ಇಲ್ಲ ಈಗಲಾದರೂ....' ಎನ್ನುತ್ತ ಪ್ರಕಾಶ್ ನನ್ನ ಮುಖ ನೋಡಿದ. ಏನು ಅರ್ಥವಾಗದೇ ಅವನ ಮುಖ ದಿಟ್ಟಿಸಿದ್ದೆ.

'ಯಾಕೋ ಹಾಗೆ ನೋಡ್ತೀಯ? ವಿಷಯ ತಿಳಿದಿಲ್ವ? ನಿನ್ನೆಗೆ ಸುಮ ತೀರಿಕೊಂಡು ಎರಡು ವರ್ಷ'

ಒಂದು ಕ್ೞಣ ಎಲ್ಲ ಸ್ಥಬ್ಧವಾಗಿತ್ತು. ಕೈಯ್ಯಲ್ಲಿರುವ ಪತ್ರವನ್ನು ಗಟ್ಟಿಯಾಗಿ ಹಿಡಿದು ಸುಮ್ಮನೇ ಕುಳಿತು ಬಿಟ್ಟೆ. ಪ್ರಕಾಶನಿಗೆ ಎನನ್ನಿಸಿತೋ 'ಪತ್ರ ಓದು. ಮನಸ್ಸು ಹಗುರಾದಮೇಲೆ ಬಾ. ಹೊರಗಡೆ ಕಾದಿರುತ್ತೇನೆ' ಎಂದು ಅಲ್ಲಿಂದ ಎದ್ದು ಹೋಗಿದ್ದ.
'ಸುಮ ಇನ್ನಿಲ್ಲ' ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ವಾಸ್ತವ ಸ್ಥಿತಿಗೆ ತಲುಪಲು ಸ್ವಲ್ಪ ಸಮಯ ಬೇಕಾಯಿತು. ಸುಮಳ ಪತ್ರ ಕೈಯ್ಯಲ್ಲಿತ್ತು. ನಡುಗುವ ಕೈಯ್ಗಳಿಂದ ಪತ್ರ ಬಿಡಿಸಿದ್ದೆ. ಮುದ್ದಾದ ಅಕ್ೞರಗಳಲ್ಲಿ ಸುಮ ಬರೆದದ್ದು ನಾಲ್ಕೇ ನಾಲ್ಕು ಸಾಲು...


ಆಕಾಶ್,
    ನನ್ನ ದಡ್ಡತನವೋ, ಆ ವಯಸ್ಸಿನ ಆಕರ್ಶಣೆಯೋ, ಪ್ರೀತಿಯೋ ನನಗಿನ್ನೂ ತಿಳಿದಿಲ್ಲ. ನಿನ್ನ ನೆನಪಿನ ಜೊತೆಗೇ ಬೆಳೆದುಬಿಟ್ಟೆ. ನಿನ್ನ ದಾರಿ ಕಾದೆ. ಕೊನೆಗೂ ನೀನು ಬರಲೇ ಇಲ್ಲ. ಕಾಯುವಿಕೆಗೆ ಅರ್ಥ ಇಲ್ಲ ಎಂದು ಅರಿವಾಗುವ ಹೊತ್ತಿಗೆ ಹೊಸ ಜೀವನ ಕೈಬೀಸಿ ಕರೆದಿತ್ತು. ಇಷ್ಟು ವರ್ಷ ನಿನ್ನ ಅರಿವಿಗೂ ಬಾರದೆ ನನ್ನ ಕಷ್ಟ, ಸುಖವನ್ನು ಹಂಚಿಕೊಂಡಿದ್ದೀಯ ಅದಕ್ಕೆ ಚಿರಋಣಿ. ಈ ನೆನಪನ್ನು ಇಲ್ಲೆ ಬಿಟ್ಟು ಹೊಸ ಕನಸಿನೆಡೆಗೆ ಹೋಗುತ್ತಿದ್ದೇನೆ. ನೆನೆಪು ಈ ಊರಿಗಷ್ಟೇ ಸೀಮಿತವಾಗಿರಲಿ.
                                                                                                                  ಸುಮ.


ನನ್ನ ಕಣ್ಣಿನಿಂದ ಜಾರಿದ ಬಿಂದುವೊಂದು 'ಸುಮ' ಎನ್ನುವ ಹೆಸರನ್ನು ತೋಯಿಸಿತ್ತು. 'ಸುಮ ನನಗೋಸ್ಕರ ಕಾದಿದ್ದಳು' ಈ ಭಾವವೇ ಮನವನ್ನು ಹಿಂಡಿತು. 'ಇನ್ಯಾವತ್ತೂ ಬರಲ್ವ?' ಹದಿನೈದು ವರ್ಷಗಳ ಹಿಂದೆ ಅವಳು ಕೇಳಿದ ಮಾತು ನನ್ನನ್ನು ಕಾಡಿತ್ತು. ಮನದಲ್ಲಿನ ನೋವುನ್ನು... ಕಣ್ಣಿರನ್ನು ತಡೆಯಲಾರೆದೇ ಹತಾಶನಾಗಿ ಕುಳಿತುಬಿಟ್ಟಿದ್ದೆ.
ಈ ಪತ್ರವನ್ನು ಪ್ರಕಾಶನಿಗೆ ಕೊಟ್ಟ ರೀತಿ ನೋಡಿದರೆ ಇದು ನನ್ನನ್ನು ತಲುಪಲೇ ಬೇಕೆಂಬ ಯಾವ ಉದ್ದೇಶವೂ ಅವಳಿಗಿರಲಿಲ್ಲ ಅಂತ ಸ್ಪಷ್ಟವಾಗಿ ಅರ್ಥವಾಗಿತ್ತು. ತನ್ನ ಮನದ ನೋವನ್ನ ಈ ಮೂಲಕ ಹೊರಕಾಕಿದ್ದಳೇನೋ. ಈ ಸಂಜೆ ಭೀಕರವಾಗಿತ್ತು!

ಎಷ್ಟೋ ಸಮಯದ ನಂತರ ನಾನು ಪ್ರಕಾಶ್ ಇದ್ದಲ್ಲಿ ಬಂದಿದ್ದೆ. ಅವನ ಮುಖದಲ್ಲಿ ದುಗುಡ. 'ಅಕ್ಕಿ...' ಅಂತ ಏನೋ ಹೇಳಲು ಹೊರಟಿದ್ದ. 'ಪ್ರಕಾಶ್ ಮೇಷ್ಟ್ರ ಮನೆಗೆ ಬಿಡು. ಧೀರಜ್ ಕಾಯುತ್ತಿರಬಹುರು ಲೇಟ್ ಆಯ್ತು. ಬೆಂಗಳೂರಿಗೆ ಹೊರಡಬೇಕಲ್ವ' ಎಂದಿದ್ದೆ. ಪ್ರಕಾಶ್ ಮುಂದೇ ಒಂದೂ ಮಾತೂ ಆಡಲಿಲ್ಲ.

ನಾನು ಧೀರಜ್ ಜೊತೆ ಮಾಪಸ್ ಬೆಂಗಳೂರಿಗೆ ಹೊರಟಿದ್ದೆ. ಮೇಷ್ಟ್ರು, ನಾಣಿ, ಪ್ರಕಾಶ್ ಆತ್ಮೀಯವಾಗಿ ಬೀಲ್ಕೊಟ್ಟಿದ್ದರು.
'ಸಾಗರ್ ಅವರ ಮನೆಯ ಹತ್ತಿರ ಹೋಗಿ ಹೋಗೊಣ?' ನಾನು ಧೀರಜ್ ಗೆ ಹೇಳಿದ್ದೆ. ಧೀರಜ್ ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡಿದ್ದ. ನಾನು ನನ್ನ ಪಾಡಿಗೆ ಡ್ರೈವಿಂಗ್ ಮಾಡುತ್ತಿದ್ದೆ.

'ಆ ಮನೆ'ಯ ಮುಂದೆ ಕಾರು ನಿಲ್ಲಿಸಿದೆ. ಸುತ್ತಲಿನ ಕತ್ತಲನ್ನು ಹೊಡದೋಡಿಸುವಂತೆ ಮನೆಯಲ್ಲಿ ಬೆಳಕು ಪ್ರಜ್ವಲಿಸುತ್ತಿತ್ತು. ಗೆಜ್ಜೆಯ ಸದ್ದು, ಜೊತೆಗೆ ಕಿಲ ಕಿಲ ನಗು. ಆ ಪುಟ್ಟ ದೇವತೆಯದು.

ಅಷ್ಟು ಹೊತ್ತಿನಲ್ಲಿ ನನ್ನನ್ನು ಅಲ್ಲಿ ನೋಡಿ ಸಾಗರ್ ಆಶ್ಚರ್ಯ ಪಟ್ಟಿದ್ದರು.

'ಊರಿಗೆ ವಾಪಸ್ ಹೋಗುವ ಮೊದಲು ನಿಮ್ಮ ಮಗಳ ಮುಖವನ್ನೊಮ್ಮೆ ನೋಡಿ ಹೋಗೋಣ ಅನ್ನಿಸಿತು ಸರ್. ಇನ್ನು ಯಾವತ್ತೂ ನೋಡಿತ್ತೇನೋ ಇಲ್ಲವೋ' ಹೇಳುತ್ತಿದ್ದಂತೆ ನನ್ನ ಮಾತು ಗದ್ಗದವಾಗಿತ್ತು. ಸಾಗರ್ ಗೆ ಎಲ್ಲ ಒಗಟಿನಂತೆ ಅನ್ನಿಸಿರಬೇಕು. ನಾನು ಮಾತ್ರ ಆ ಪುಟ್ಟ 'ಕನಸಿ' ನ ಕೆನ್ನೆಗೊಂದು ಮುತ್ತಿಟ್ಟು ಬಿಗಿಯಾಗಿ ತಬ್ಬಿದ್ದೆ. ಕಣ್ಣು ತುಂಬಿ ಬಂದಿತ್ತು. ಮಂಜಾದ ಕಣ್ಣುಗಳಲ್ಲೇ ಆ ಮೆನೆಯನ್ನೊಮ್ಮೆ ದೃಷ್ಟಿಸಿದ್ದೆ. ಸುಮ ಬೆಳೆದ ಮನೆ. ಅವಳ ಗೆಜ್ಜೆಸದ್ದು ಕೇಳಿಸಿತು. ಅವಳು ನನಗೋಸ್ಕರ ಇದೇ ಮನೆಯಲ್ಲಿ ಕಾದಿದ್ದಳು....! ಇನ್ನು ಇಲ್ಲಿರಲಾರೆ ಎನ್ನಿಸಿ ಹೊರಟುಬಿಟ್ಟೆ.

ಆಶ್ಚರ್ಯದಿಂದ ನನ್ನನ್ನೆ ನೋಡುತ್ತಿದ್ದ ಸಾಗರ್ ಗೆ 'ನಿಮ್ಮ ಮಗಳು ದೇವತೆ' ಎಂದಿದ್ದೆ ಮನದ ಮಾತು ಹೊರ ಬಂದಿತ್ತು.
ಸಾಗರ್ ಮುಗುಳ್ನಕ್ಕರು. 'ಡ್ಯಾಡಿ, ಅಂಕಲ್ ಇನ್ನು ಬರಲ್ವಾ?' ಮುದ್ದಾಗಿ ಕೇಳಿದ್ದಳು ಆ ಪುಟ್ಟ ದೇವತೆ. 'ಇನ್ಯಾವತ್ತೂ ಬರಲ್ಲಾ?' ಸುಮಳ ಮಾತು ಮತ್ತೆ ಕಾಡಿತು. ವಿಶಾದದ ನಗು ನಕ್ಕಿದ್ದೆ.

'ಬರ್ತಾರೆ ಪುಟ್ಟ. ಖಂಡಿತ ಬರ್ತಾರೆ. ಈಗ ನೀನವರಿಗೆ ಟಾಟಾ ಮಾಡು' ಸಾಗರ್ ಮಗಳಿಗೆ ಹೇಳುತ್ತಿದ್ದರು. ಮುದ್ದಾದ ನಗು ಚಿಮ್ಮಿಸಿ 'ಟಾಟಾ' ಅಂತ ಕೈ ಬೀಸಿದ್ದಳು. ಸುತ್ತಲೆಲ್ಲ ಬೆಳದಿಂಗಳು ಚೆಲ್ಲಿದಂತಾಯಿತು.

'ಸಾಗರ್ ತುಂಬಾ ಒಳ್ಳೆಯವನು. ಮರುಮದುವೆಯಾಗು ಅಂತ ಎಷ್ಟೇ ಒತ್ತಾಯಿಸಿದರು, ಇಲ್ಲ ನನ್ನ ಜೊತೆ ಸುಮಳ ಕನಸಿದೆ ನನಗಷ್ಟೆ ಸಾಕು ಅಂತ ಹೇಳಿಬಿಟ್ಟಿದ್ದಾನಂತೆ. ಈ ಮನೆಯನ್ನು ಮಾರಲೂ ಇಷ್ಟವಿರಲಿಲ್ಲ ಅವನಿಗೆ. ಆದರೂ ಅನಿವಾರ್ಯ. ನೋಡಿಕೊಳ್ಳಲು ಯಾರೂ ಇರಲಿಲ್ಲವಲ್ಲ' ಮೇಷ್ಟ್ರು ನಾವು ಹೊರಡುವ ಮೊದಲು ಸಾಗರ್ ಬಗ್ಗೆ ಹೇಳುತ್ತಿದ್ದ ಮಾತು ನೆನಪಿಗೆ ಬಂತು.

ಸಾಗರ್ ಕೈಯ್ಯಲ್ಲಿ ಸುಮಳ ಕನಸು ಭದ್ರವಾಗಿತ್ತು...!

ನಮ್ಮ ಕಾರು ಬೆಂಗಳೂರು ದಾರಿ ಹಿಡಿಯಿತು. ಡ್ರೈವಿಂಗ್ ಮಾಡುತ್ತಿದ್ದ ಧೀರಜ್ ಮುಖದಲ್ಲಿ ಗೊಂದಲ ಜೊತೆಗೆ ನೂರಾರು ಪ್ರಶ್ನೆಗಳಿದ್ದವು. ಉತ್ತರಿಸುವ ಶಕ್ತಿ ಈಗ ನನ್ನಲ್ಲಿರಲಿಲ್ಲ. ಸುಮ್ಮನೇ ಕಣ್ಮುಚ್ಚಿ ಕುಳಿತಿದ್ದೆ. ಎಷ್ಟೊ ಹೊತ್ತಿನ ಮೇಲೆ ಒಂದು ನಿರ್ಧಾರಕ್ಕೆ ಬಂದಿದ್ದೆ.

'ಧೀರಜ್ ಆ ಮನೆ ನನಗೆ ಬೇಕು ಕಣೋ'

'ವಾಟ್' ಧೀರಜ್  ಶಾಕ್ ತಗುಲಿದಂತೆ ಚೀರಿದ್ದ.

'ಹೂಂ ಕಣೋ. ನೀನು ಕೊಂಡುಕೊಂಡದ್ದಕ್ಕಿಂತ ಹೆಚ್ಚಿನ ಬೆಲೆ ಕೊಡುತ್ತೇನೆ ನನಗೆ ಕೊಟ್ಟು ಬಿಡು ಪ್ಲೀಸ್' ಗೋಗರೆಯುವಂತೆ ಕೇಳಿದ್ದೆ.

'ಯಾಕೋ ಸಂಜೆಯಿಂದ ವಿಚಿತ್ರವಾಗಿ ಆಡ್ತ ಇದೀಯ? ಏನು ವಿಷಯ? ಅಂತದ್ದೇನಿದೆ ಆ ಮನೆಯಲ್ಲಿ?' ಧೀರಜ್ ನ ಗೊಂದಲ ಕೊನೆಗೂ ಪ್ರಶ್ನೆಯಾಗಿ ಹೊರಬಿತ್ತು.

'ನನ್ನ ನೆನಪಿದೆ' ಚುಟುಕಾಗಿ ಉತ್ತರಿಸಿದ್ದೆ.

ಅರ್ಥವಾಗಲಿಲ್ಲ ಎನ್ನುವಂತೆ ನನ್ನ ಮುಖ ನೋಡಿದ್ದ. ಅವನಿಗೆ ಅರ್ಥಮಾಡಿಸಬೇಕಿತ್ತು. ಅರ್ಥಮಾಡಿಕೊಳ್ಳುತ್ತಾನೆ. 'ಆ ಮನೆ' ನನ್ನದಾಗುತ್ತದೆ ಅನ್ನೊ ನಂಬಿಕೆ ಇತ್ತು.. ಈಗ ಎಂತಹುದೋ ಒಂದು ಸಮಾಧಾನ. ಈ ನನ್ನ ಹುಟ್ಟೂರು ಎಷ್ಟೋ ವರ್ಷಗಳಿಂದ ಗೊಂದಲದಲ್ಲಿದ್ದ ನನ್ನ ಮನಸ್ಸನ್ನ ಶಾಂತವಾಗಿಸಿ ನೆಮ್ಮದಿ ತರಿಸಿತು.

ಕೊನೆಗೆ, ಸುಮ ಬಿಟ್ಟು ಹೋದ ನೆನಪನ್ನು ನಾನು ಆಯ್ದುಕೊಂಡಿದ್ದೆ....!





Wednesday 13 April 2011

ಸವಿ ಸವಿ ನೆನಪು... (ಭಾಗ ೧)

[Dear friends..  ಇದು ಯಾವುದೇ ಕಾಲ್ಪನಿಕ ಕಥೆ ಅಲ್ಲ. ನನ್ನ ಆತ್ಮೀಯ ಗೆಳೆಯನೊಬ್ಬನ ಜೀವನದಲ್ಲಿ  ನಡೆದ ಘಟನೆ. (ಹೆಸರನ್ನು ಮಾತ್ರ ಬದಲಿಸಲಾಗಿದೆ) ಅವನ ಭಾವನೆಗಳನ್ನು ನನ್ನ ಶಬ್ಧರೂಪದಲ್ಲಿ ತರುವ ಸಣ್ಣ ಪ್ರಯತ್ನ ಮಾಡಿದ್ದೀನಿ. ತಪ್ಪಿದ್ದಲ್ಲಿ ತಿದ್ದಿ ನಿಮ್ಮ ಅಭಿಪ್ರಾಯ ತಿಳಿಸಿ...]


'ಅಕ್ಕಿ, ನಮ್ಮನೆ ಹಿಂದಿನ ರಸ್ತೆಯಲ್ಲಿ ಒಂದು ಪುಟ್ಟ ಗಣೇಶನ ಗುಡಿ ಇತ್ತಲ್ಲ ಅದನ್ನು ದೊಡ್ಡದಾಗಿ ಕಟ್ಟಿಸಿದಾರಂತೆ. ಹಿಂದಿನಸಾರಿ ರಾಧಕ್ಕ ಸಿಕ್ಕಾಗ ಹೇಳಿದ್ದರು. ಮರೆಯದೆ ಅಲ್ಲಿಗೆ ಹೋಗಿ ಅರ್ಚನೆ ಮಾಡಿಸಿಕೊಂಡು ಬಾ. ಹಾಗೆ ರಾಧಕ್ಕನ ಮನೆಗೂ ಹೋಗೋದು ಮರಿಬೇಡ.ಹತ್ತು ಹದಿನೈದು ವರ್ಷ ಆಯ್ತು ನೀನು ಅಲ್ಲಿಗೆ ಹೋಗಿ.ನಾವೂ ಮೂರು ವರ್ಷದ ಹಿಂದೆ ಹೋಗಿದ್ದು ಅಲ್ವ?' ಎನ್ನುತ್ತ ಚಕ್ಕುಲಿ, ಉಂಡೆ ಪ್ಯಾಕೇಟ್ ಮಾಡುತ್ತಿದ್ದ ಅಮ್ಮ ಅಪ್ಪನ ಮುಖ ನೋಡಿದರು.

ಅಪ್ಪ 'ಹುಂ' ಅನ್ನುವಂತೆ ತಲೆಯಾಡಿಸಿದ್ರು.

'ಅಮ್ಮ, ಇದೆಲ್ಲ ಯಾಕೆ? ನಾನು ಯಾರದೊ ಮನೆಗೆ, ಊರು ಸುತ್ತಕ್ಕೆ ಹೋಗ್ತಾ ಇಲ್ಲ. ನನ್ನ ಫ್ರೆಂಡ್ ಜೊತೆ ಕೆಲಸದ ಮೇಲೆ ಹೋಗ್ತ ಇರೋದು. ನಿನಗೆ ಗೊತ್ತಿರೋ ಜಾಗ ಜೊತೆಗೆ ಬಾರೋ ಅಂತ ತುಂಬಾ ಕರೆದಿರೋದಕ್ಕೆ ಹೋಗುತ್ತಿರೋದಷ್ಟೆ. ಇದೆಲ್ಲ ಯಾಕಮ್ಮ?' ಅಂದೆ.

'ನೀನು ಹುಟ್ಟಿದ ಊರು ಕಣೋ. ನೋಡು ಅಲ್ಲಿಗೆ ಹೋಗಿ ನಿನಗೂ ಖುಷಿಯಾಗುತ್ತೆ. ಎಲ್ಲರು ಎಷ್ಟು ಇಷ್ಟ ಪಡ್ತಾರೆ. ನಾರಾಯಣ ಮೇಷ್ಟ್ರ ಮನೆಯಲ್ಲೇ ಉಳಿದುಕೊಳ್ಳಿ. ನಾನಾಗಲೇ ಅವರಿಗೆ ಫೋನ್ ಮಾಡಿ ಹೇಳಿದ್ದೀನಿ' ಅಪ್ಪ ಹೇಳಿದರು.

ಅಮ್ಮನ ಮುಖದಲ್ಲಿ ಸಂಭ್ರಮವಿತ್ತು. ಅಪ್ಪನೂ ಅಮ್ಮನಿಗೆ ಸಪೋರ್ಟ್ ಮಾಡ್ತಾ ಇದಾರಲ್ಲ ಇನ್ನು ಹೇಳಿ ಪ್ರಯೋಜನ ಇಲ್ಲ ಅನ್ನಿಸಿ, 'ಸರಿ ಧೀರಜ್ ಬರೋ ಟೈಮ್ ಆಯ್ತು ನಾನು ರೆಡಿಯಾಗ್ತಿನಿ' ಅಂತ ಅಲ್ಲಿಂದ ಕಳಚಿಕೊಂಡೆ.

ಓ ನಿಮಗೆ ಕನ್ ಪ್ಯೋಸ್ ಆಗ್ತಾ ಇದ್ಯಾ? ನಾನು ಯಾರು ಏನು ಅಂತಾನೇ ಗೊತ್ತಾಗ್ತಿಲ್ಲ ಅಲ್ವ? ಈಗ ಹೇಳ್ತಿನಿ ಕೇಳಿ...

ನನ್ನ ಹೆಸರು ಆಕಾಶ್. ಅಮ್ಮ ಪ್ರೀತಿಯಿಂದ 'ಅಕ್ಕಿ' ಅಂತ ಕರೆಯೋದು. (rice ಅಲ್ಲ.) ನಾನೊಬ್ಬ software engineer (unfortunately!) ಅಪ್ಪ ಅಮ್ಮನ ಜೊತೆ ಬೆಂಗಳೂರಿನಲ್ಲಿ ಇರೋದು. ನನ್ನ ಹುಟ್ಟೂರು ಚಿಕ್ಕಮಂಗಳೂರಿನ ಹತ್ತಿರ ಒಂದು ಪುಟ್ಟ ಹಳ್ಳಿ! 'ಈಗ ತುಂಬಾ ಬದಲಾಗಿದೆ ಹಳ್ಳಿ ಅಂತಲೇ ಅನಿಸಲ್ಲ ಕಣೋ' ಅಂತ ಅಮ್ಮ ಹೇಳ್ತ ಇದ್ರು. ನಾನು ನೋಡಿಲ್ಲ. 7th ವರೆಗೂ ಓದಿದ್ದೆಲ್ಲ ಅಲ್ಲೆ. ಆಮೇಲೆ, ಇರುವ ಸ್ವಲ್ಪ ಜಮೀನನ್ನು ಮಾರಿ ಅಪ್ಪ ಸೇರಿದ್ದು ಈ ಮಹಾನಗರಿ ಬೆಂಗಳೂರನ್ನು. ಅಲ್ಲಿಂದ ಹೊರಟುಬಂದ ಮೇಲೆ ಒಂದು ಬಾರಿಯೂ ನಾನು ಆ ಊರಿಗೆ ಕಾಲಿಟ್ಟಿಲ್ಲ. ಹೋಗಬಾರದು ಅಂತೆನೂ ಇಲ್ಲ. ಅವಕಾಶ ಸಿಕ್ಕಿರಲಿಲ್ಲ. ನನ್ನ ಓದು, ಕೆಲಸ, ವಿದೇಶ ಸುತ್ತಿದ್ದು ಇದರ ಮಧ್ಯೆ ಆ ಚಿಕ್ಕ ಊರಿನ ನೆನಪು ಬರುತ್ತಾ?! ಆಗೊಮ್ಮೆ ಈಗೊಮ್ಮೆ....

ಧೀರಜ್ ನನ್ನ ಪ್ರೆಂಡ್. PU ಇಂದಲೂ ನಾವಿಬ್ಬರು ಒಟ್ಟಿಗೇ ಓದಿದ್ದು. ನಮ್ಮಮ್ಮನಿಗೆ ಎರಡನೇ ಮಗ ಇದ್ದಂತೆ. ಇತ್ತೀಚೆಗೆ ಅವನಿಗೊಂದು ಕ್ರೇಸ್. ಚಿಕ್ಕಮಂಗಳೂರಿನ ಹತ್ತಿರದೆಲ್ಲಾದರೂ ಒಂದು ಜಾಗ ತಗೋಂಡು ಪುಟ್ಟದೊಂದು ರೆಸೊರ್ಟ್ ತರಹದ್ದು ಮಾಡಬೇಕು ಅಂತ. 'girl friend ಗೆ gift ಮಾಡಕ್ಕಾ?' ಅಂತ ಆಗಾಗ ರೇಗಿಸ್ತಿದ್ದೆ ನಾನು. ಅದೇ ವಿಷಯವಾಗಿ ಮತ್ತೆ ನಾನು ನನ್ನ ಹುಟ್ಟಿದೂರಿಗೆ ಹೊರಟಿದ್ದೆ.

ಚಿಕ್ಕಮಂಗಳೂರು ಅಂತ ಹೆಸರು ಕೇಳಿದರೆ ತಕ್ೞಣ ನನ್ನ ನೆನಪಿಗೆ ಬರುವುದೇ ಆ ಬೆಳ್ಳಿಯ ಕಾಲ್ಗೆಜ್ಜೆ... ಬೆಳದಿಂಗಳಿನಂತ ಮುಖ.. ಆ ಬೊಗಸೆಗಣ್ಣುಗಳು.. ತುಟಿಯ ತಿರುವಿನಲ್ಲೊಂದು ಪುಟ್ಟ ದೃಷ್ಟಿಬೊಟ್ಟು. ಹೂಂ.. ಅವಳು 'ಸುಮ'. ಹೆಸರಿಗೆ ತಕ್ಕಂತೆ ಸುಮಧುರವಾದ ಹುಡುಗಿ. ನನ್ನ first love!!


ನಾನವಳನ್ನು ಮೊದಲನೇ ಬಾರಿ ನೋಡಿದ್ದು 5 ನೇ ಕ್ಲಾಸಿನಲ್ಲಿದ್ದಾಗ. ಸ್ಕೂಲಿನಲ್ಲಿ ಏನೋ ಕಿಡಿಗೇಡಿ ಕೆಲಸ ಮಾಡಿದೆ ಅಂತ ಮೇಷ್ಟ್ರು ಬೇಂಚಿನಮೇಲೆ ಬಗ್ಗಿ ನಿಲ್ಲಿಸಿದ್ದರು. ತಲೆ ಎತ್ತಿದರೆ ಬೆತ್ತ ಬೀಳುತ್ತಿತ್ತು. ಅವಳಿನ್ನು ನಮ್ಮ ಸ್ಕೂಲಿಗೆ ಹೊಸಬಳು. ಅಂದೇ ಮೊದಲ ದಿನ. ಸ್ವಲ್ಪ ತಡವಾಗಿಯೇ ಕ್ಲಾಸಿಗೆ ಬಂದಿದ್ದಳು. ನನ್ನ ಪಕ್ಕ ಇದ್ದ ಗೆಳೆಯರೆಲ್ಲ 'ಹೊಸ ಹುಡುಗಿ ಕಣೋ' ಅಂತಿದ್ದರು. ನನಗೋ ತಲೆ ಎತ್ತಿ ನೋಡುವಂತಿಲ್ಲ. ಆದರೂ ಕಷ್ಟಪಟ್ಟು ಕಣ್ಣನ್ನಷ್ಟೇ ತಿರುಗಿಸಿ ನೋಡಿದ್ದೆ. ಕಾಣಿಸಿದ್ದು, ರೇಶಿಮೆ ಲಂಗದ ಅಂಚಿನಲ್ಲಿ ಸುಂದರವಾದ ಪಾದ, ಅಲ್ಲೊಂದು ಬೆಳ್ಳಿಯ ಕಾಲ್ಗೆಜ್ಜೆ ಅಷ್ಟೆ...! ಅವತ್ತಿನಿಂದ ಆ ಕಾಲ್ಗೆಜ್ಜೆಯ ನಾದಕ್ಕೆ ನನ್ನ ಮನ ಕುಣಿಯಲು ಪ್ರಾರಂಭಿಸಿತ್ತು. ಮಾರನೆಯ ದಿನದಿಂದ ಕ್ಲಾಸಿನಲ್ಲಿ ಪೂರ್ತಿ ಅವಳನ್ನು ನೋಡುತ್ತಾ ಕುಳಿತಿರುವುದೊಂದ ಕೆಲಸ. ಆ ಗುಲಾಬಿ ಕೆನ್ನೆಗಳು.. ತುಟಿಯ ಬಲ ತಿರುವಿನಲ್ಲೊಂದು ದೃಷ್ಟಿಬೊಟ್ಟು ಇಟ್ಟಂತೆ ಪುಟ್ಟ ಮಚ್ಚೆ... ಕುತೂಹಲ ತುಂಬಿದ ಕಣ್ಣುಗಳು.. ಕಿವಿಯಲ್ಲೊಂದು ಓಲಾಡುವ ಜುಮುಕಿ.. ಕೈಯಲ್ಲಿ ಒಂದೇ ಒಂದು ಬಳೆ... ಯಾವತ್ತೂ ಘಲ್ ಘಲ್ ಅಂತ ಸದ್ದುಮಾಡುತ್ತ ತನ್ನ ಇರುವಿಕೆಯನ್ನು ಹೇಳುವ ಕಾಲ್ಗೆಜ್ಜೆ.... ಊಹುಂ ಪಾಠ ತಲೆಗೆ ಹತ್ತಲೇ ಇಲ್ಲ!. ವಾರದ ಆರೂ ದಿನ ಅವಳಿಗೋಸ್ಕರವೇ ಸ್ಕೂಲಿಗೆ ಹೋಗುತ್ತಿದ್ದೆ! ಭಾನುವಾರದಂದು ಮಾತ್ರ ಜೀವಹೊದಂತೆ ಆಗುತ್ತಿತ್ತು. ನಮ್ಮ ಮನೆಯ ತೋಟದಲ್ಲಿ ಕುಳಿತರೆ ಅವರ ಮನೆ ಕಾಣಿಸುತ್ತಿತ್ತು. ಊಟ ತಿಂಡಿ ಬಿಟ್ಟು ಅವಳು ಮನೆಯಿಂದ ಹೊರಬರುವುದನ್ನೆ ಕಾಯುತ್ತ ತೋಟದಲ್ಲಿ ಕುಳಿತಿರುತ್ತಿದ್ದೆ. ಎಷ್ಟೊ ಗಂಟೆಗಳವರೆಗೆ ಆ ಮನೆಯನ್ನೇ ದಿಟ್ಟಿಸುತ್ತಿದ್ದೆ ಒಂದೇ ಒಂದುಬಾರಿ ಅವಳನ್ನು ನೋಡುವುದಕ್ಕೋಸ್ಕರ! ಎರಡು ವರ್ಷಗಳವರೆಗೂ ನಾನು ಮಾಡಿದ್ದು ಇದೊಂದೇ ಕೆಲಸ. ಒಂದು ಬಾರಿಯೂ ಅವಳನ್ನೂ ಮಾತನಾಡಿಸುವ ಧೈರ್ಯ ಬರಲೇ ಇಲ್ಲ. ಇನ್ನು ಅವಳು.. ಮೊದಲ ಬಾರಿ ನೋಡಿದಾಗ ಹೇಗಿದ್ದಳೋ ಹಾಗೆ ಇದ್ದಳು. ಅದೇ ಮುಗ್ಧತೆ, ಅದೇ ಸೌಮ್ಯತೆ.. ಅವಳು ಸ್ವಲ್ಪವೂ ಬದಲಾಗಲೇ ಇಲ್ಲ! ಎಷ್ಟೋಸಾರಿ ಮನೆಗೆ ಬರುತ್ತಿದ್ದಳು. ಅಮ್ಮನಿಗೆ ಅವಳೆಂದರೆ ಇಷ್ಟ ಆಗಿತ್ತು. ಮಾತಾನಾಡುವುದಂತೂ ದೂರದ ಮಾತು.. ಮುಖನೋಡಿ ಒಂದು smile  ಮಾಡಿದವಳಲ್ಲ. ನಾನೂ ಅಷ್ಟೆ!

ನನ್ನದು 7th ಮುಗಿದಿತ್ತು. ನಾವು ಶಾಶ್ವತವಾಗಿ ಆ ಊರನ್ನು ಬಿಡ್ತಾಇದ್ವಿ. ನಾವು ಹೊರಡುವ ಸಮಯದಲ್ಲಿ ಅವಳ ಮನೆಯ ಗೇಟಿನಬಳಿ ನಿಂತಿದ್ದಳು. 'ಇನ್ಯಾವತ್ತೂ ಬರಲ್ವಾ?' ಅವಳು ನನಗೆ ಕೇಳಿದ ಮೊದಲ ಮತ್ತು ಕೊನೆಯ ಪ್ರಶ್ನೆ! 'ಗೊತ್ತಿಲ್ಲ' ನನ್ನ ಉತ್ತರ ಇಷ್ಟೆ. ಕೂತೂಹಲ ಭರಿತವಾಗಿರುತ್ತಿದ್ದ ಅವಳ ಕಣ್ಣುಗಳಲ್ಲಿ ಅವತ್ತು ನೋವಿದೆ ಅನ್ನಿಸಿತ್ತು. ಬೆಂಗಳೂರು ಸೇರಿನ ಒಂದು ತಿಂಗಳವರೆಗೂ ನನ್ನನ್ನು ಕಾಡಿದ್ದು ಅದೇ ಕಣ್ಣು.. ಅದೇ ಕಾಲ್ಗೆಜ್ಜೆಯ ಸದ್ದು..! ನನ್ನ ನೋವು, ಸಂಕಟ ಹೇಳತೀರದು. ಈ ಬೆಂಗಳೂರಿನ ಮಹಿಮೆ ಎಂತಹುದು ನೋಡಿ... ಎಂತಹ ನೋವು, ನೆನಪುಗಳನ್ನೂ ಮರೆಸಿ ತನ್ನಲ್ಲಿ ಲೀನವಾಗಿಸಿಕೊಳ್ಳುತ್ತದೆ. ನನಗಾಗಿದ್ದೂ ಹಾಗೆ. ಸ್ವಲ್ಪೇ ದಿನದಲ್ಲಿ ನಾನೂ ಬೆಂಗಳೂರಿಗನಾಗಿ ಹೋಗಿದ್ದೆ. ಆದರೆ ಎಂದೋ ಒಮ್ಮೊಮ್ಮೆ ಆ ಗೆಜ್ಜೆಯ ಸದ್ದು ನನ್ನನ್ನು ಕಾಡದೇ ಇರಲಿಲ್ಲ..


ಈಗೇ ನಾಲಕ್ಕು ವರ್ಷಗಳ ಹಿಂದೆ ಅಮ್ಮ ಇದ್ದಕ್ಕಿದ್ದಂತೆ ಕೇಳಿದ್ದರು 'ಚಿಕ್ಕಮಂಗಳೂರಿನಲ್ಲಿ ಇದ್ದಾಗ ಸುಮ ಅಂತ ಒಬ್ಬಳು ಚೆಂದದ ಹುಡುಗಿ ನಮ್ಮನೆಗೆ ಬರ್ತಿದ್ದಳು ನೆನಪಿದೆಯಾ? ನಿಮ್ಮದೇ ಸ್ಕೂಲಿನಲ್ಲಿ ಓದ್ತಿದ್ಲಲ್ಲೋ' ಅಂತ. ತಕ್ೞಣ ಕುತೂಹಲ ಜಾಸ್ತಿ ಆಗಿತ್ತು. ಅವಳೇನಾದ್ರೂ ನಮ್ಮ ಮನೆಗೆ ಬರ್ತಿದಾಳಾ? ಬೆಂಗಳೂರಿನಲ್ಲೇ ಇದಾಳ? ಇಲ್ಲ ಅಮ್ಮ ಅವಳನ್ನೇ ಸೊಸೆ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದಾರ? oh my god.. ನನ್ನ ಎದೆ ಬಡಿತ ಜೋರಾಗಿತ್ತು. ಆದರೂ ತಣ್ಣನೇಯ ದನಿಯಲ್ಲಿ ಹೇಳಿದ್ದೆ
'ಹೂಂ ಅಮ್ಮ ನೆನಪಿದೆ. ಏನಂತೆ?' ಅಂತ, ಅವಳನ್ನೆನಾದರೂ ಮರೆಯಲು ಸಾಧ್ಯವಾ ಅಂತ ಮನದಲ್ಲೇ ಅಂದುಕೊಳ್ಳುತ್ತ.

'ಅವಳದು ಮದುವೆ ಆಯಿತಂತೆ ಕಣೋ' ಗೆಜ್ಜೆಯ ನಾದಕ್ಕೆ ಕುಣಿಯುತ್ತಿದ್ದ ಮನಸ್ಸು ಲಕ್ೞಣ ಸ್ಥಬ್ದವಾಗಿತ್ತು.

'ಅವಳಿಗೆ ಮುಂದೆ ಓದೋಕೆ, ಕೆಲಸ ಮಾಡೋಕೆ ಇಷ್ಟ ಇತ್ತಂತೆ. ಆದರೆ ಎನು ಮಾಡ್ತೀಯ, ಹಿಂದಿನ ವರ್ಷವೇ ಅವರಮ್ಮ ತೀರಿಕೊಂಡಿದ್ರಂತೆ. ಅಪ್ಪನಿಗೂ ಆರೋಗ್ಯಸರಿ ಇರಲ್ಲ ಮುಂದೆ ಅವಳನ್ನು ನೋಡಿಕೊಳ್ಳೊಕೆ ಯಾರೂ ಇರಲ್ಲ ಅಂತ ಒತ್ತಾಯದಿಂದ ಮದುವೆ ಮಾಡಿದ್ರಂತೆ. ಅವಳ ಮದುವೆಯಾಗಿ ಒಂದೇ ವಾರದಲ್ಲಿ ಅವರಪ್ಪನೂ ತೀರಿಕೊಂಡರಂತೆ. ಊರಿನವರೊಬ್ಬರು ಸಿಕ್ಕಿದ್ರು ಹೇಳಿದ್ರು. ಪಾಪದ ಹುಡುಗಿ ಕಣೋ. ಮಧ್ಯಾನ್ಹ ಎರಡು ತುತ್ತು ಗಂಟಲಲ್ಲಿ ಇಳಿಯಲಿಲ್ಲ ಈ ವಿಷಯ ಕೇಳಿ' ಅಮ್ಮ ವ್ಯಥೆಯಿಂದ ಹೇಳಿದರು.
ಅಮ್ಮನೇ ಇಷ್ಟು ನೋವು ಪಡುತ್ತಿರುವಾಗ ಇನ್ನು ನನ್ನ ಗತಿ!! ಒಂದು ವಾರ ಏನೋ ಸಹಿಸಲಾಗದ ಸಂಕಟ.. ಅರ್ಥವಾಗದ ತಳಮಳ..
'ಛೆ ಈ ಹುಡುಗಿಯರ್ಯಾಕೆ ಬೇಗ ಮದುವೆಯಾಗಿ ಇಡುತ್ತಾರೋ?!'

ದಿನ ಕಳೆದಂತೆ ಆ ನೋವು ಮರೆಯಾಗಬೇಕಿತ್ತು. ಎಲ್ಲೊ ಒಮ್ಮೊಮ್ಮೆ ಹಳೆಯ ನೆನಪುಗಳೆಲ್ಲ ಬಂದು ಕಾಡುತ್ತಿತ್ತು. ಮತ್ತೆ ಆ ಊರಿಗೆ ಹೋಗಲೇ ಬಾರದು ಎಂದುಕೊಂಡಿದ್ದೆ. ಆದರೆ ಈಗ ನನ್ನ ಪ್ರೆಂಡ್ ಗೋಸ್ಕರ ಹೊರಟಿದ್ದೀನಿ. ಒಂದು ಕಡೆ ಖುಷಿ... ಇನ್ನೊಂದು ಕಡೆ ಹೇಳಿಕೊಳ್ಳಲಾಗದ ಸಣ್ಣ ಆತಂಕ... ಇನ್ನು ಆ ಊರಿನಲ್ಲಿ ನನಗೋಸ್ಕರ ಏನು ಕಾಡಿದೆಯೋ.....?!!
                                                     --------------------------
[ಮುಂದಿನ ಭಾಗ ಆದಷ್ಟು ಬೇಗ...!]

Tuesday 12 April 2011

ಒಂದೆ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ...

ಹೊರಟು ತಪ್ಪುಮಾಡಿದೆನಾ?
ಹಾಗಂತ ಕೇಳಿಕೊಂಡೆನಾದರೂ, ಅದಕ್ಕೆ ಉತ್ತರ ಹುಡುಕುವ ವ್ಯವಧಾನ ಇರಲಿಲ್ಲ. ಬೀಳುತ್ತಿರುವ ಬಿರು ಮಳೆಗೆ ದೀಪವೆಲ್ಲ ಆರಿಹೋಗಿ ಸುತ್ತಲೆಲ್ಲ ಒಂದು ಅಂಧಃಕ್ಕಾರ. ನಾ ಕುಳಿತಿರುವ ಆಟೋದ ಬೆಳಕು ಬಿರುಮಳೆಯಲ್ಲಿ ಲೀನವಾಗಿ ಹೋಗುತ್ತಿದೆ ಅನಿಸುತ್ತಿತ್ತು. ಮಳೆಯ ರಾತ್ರಿಗಳಲ್ಲಿ ಬೆಂಗಳೂರು ಇಷ್ಟು ಭಯಾನಕವಾಗಿ ಕಾಣಿಸುತ್ತದೆ ಅಂದುಕೊಂಡಿರಲಿಲ್ಲ. ಎಷ್ಟು ವಿಚಿತ್ರ ಈ ಬೆಂಗಳೂರಿನಲ್ಲಿ... ಬೆಳಿಗ್ಗೆಯಿಂದ ಉರಿ ಬಿಸಿಲಿದ್ದರೆ ಸಂಜೆಯಾಗುತ್ತಿದ್ದಂತೆ ಹುಚ್ಚು ಮಳೆ ಪ್ರಾರಂಭವಾಗಿಬಿಡುತ್ತದೆ. ಎರಡು ದಿನಗಳಿಂದ ಇದೆ ಕತೆ. ಇಂದು ಹೀಗೆ ಆಯಿತು. ಬೆಳಿಗ್ಗೆಯಿಂದ ಮನೆಯಲ್ಲೇ ಏನೋ ಓದುತ್ತ ಕುಳಿತವಳಿಗೆ ಸಂಜೆಯಾಗುತ್ತಿದ್ದಂತೆ ನೆನಪಾಗಿತ್ತು, ಎರಡು ದಿನದಲ್ಲಿ ಅಮ್ಮನ ಹುಟ್ಟಿದ ಹಬ್ಬ... ಏನೂ ಗಿಫ್ಟ್ ತೆಗೆದುಕೊಂಡಿಲ್ಲ ಅಂತ. ಮನಸ್ಸಿಗೆ ಯೋಚನೆ ಬಂದಿದ್ದೇ ರೆಡಿಯಾಗಿ ಹೊರಟೆ ಬಿಟ್ಟೆ. ಮನೆಯಿಂದ ಹೊರಟು ರಸ್ತೆಗೆ ಕಾಲಿರಿಸಿದ್ದೇ, ನನ್ನ ಹಣೆಯ ಮೇಲೆ ಬಿತ್ತು ಮಳೆಯ ದೊಡ್ಡ ಹನಿ!

ನಾನು ಆಟೋ ಹಿಡಿದು 4th block ತಲುಪುವಷ್ಟರಲ್ಲಿ ಪವರ್ ಹೋಗಿ ಪೂರ್ತಿ ಕತ್ತಲಾವರಿಸಿತ್ತು. ಶೋಪಿಂಗ್ ಗೆ ಅಂತ ಬಂದವಳಿಗೆ ಪವರ್ ಇಲ್ಲದ್ದು ನೋಡಿ ನಿರಾಶೆಯಾದದ್ದೇನೋ ನಿಜ. ಆದರೆ ಇಲ್ಲಿಯವರೆಗೆ ಬಂದು ವಾಪಸ್ ಹೋಗುವ ಮನಸ್ಸಾಗಲಿಲ್ಲ. ಕೆಲವೊಂದು ಅಂಗಡಿಗಳಲ್ಲಿ ಜನರೆಟರ್ ಓನ್ ಮಾಡಿದ್ದರೆ, ಇನ್ನೂ ಕೆಲವಲ್ಲಿ ಕ್ಯಾಂಡಲ್ ಹಚ್ಚಿದ್ದರು. ಅಂತೋ ಬೆಳಕಿತ್ತು..! ಅಂಗಡಿಯ ಒಳಗೆ ತುಂಬಾ ಜನ ಇದ್ದರು. ಶೊಪಿಂಗ್ ಗೆ ಬಂದವರ ಜೊತೆಗೆ, ಮಳೆಯಿಂದ ರಕ್ೞಣೆ ಪಡೆಯಲು ಬಂದವರೇ ಹೆಚ್ಚಿದ್ದರು. ಅಷ್ಟೊಂದು ಜನರ ಮಧ್ಯೆ ನಾನೂ ಒಬ್ಬಳಾಗಿ ಸೇರಿಕೊಂಡು ನನ್ನ ಇಷ್ಟದ ಪುಸ್ತಕದ ಅಂಗಡಿಯ ಕಡೆ ಹೆಜ್ಜೇ ಹಾಕಿದೆ.

ಅಮ್ಮ ನನ್ನಂತೆಯೇ ಪುಸ್ತಕ ಪ್ರೇಮಿ. ನಿಜ ಅಂದರೆ, ಅಮ್ಮನಿಂದಲೇ ನನಗೆ ಪುಸ್ತಕಗಳ ಗೀಳು ಹಿಡಿದದ್ದು. ಹಿಂದಿನ ವರ್ಷ ಅಮ್ಮನ ಹುಟ್ಟಿದ ದಿನದಂದು ಸೀರೆ ಕೊಟ್ಟಿದ್ದೆ. 'ಪಪ್ಪನೂ ಸೀರೆನೆ ಕೊಡ್ತಾರೆ, ಎಷ್ತೊಂದು ಸೀರೆ ಇದೆ ಗೊತ್ತಾ? ಹಬ್ಬಕ್ಕೊಂದು ಸೀರೆ.. ಬೇರೆ ಏನಾದ್ರೂಕೊಡ್ಬಾರ್ದಾ?'  ಅಮ್ಮ ಹೇಳಿದ್ದರು. ಅಮ್ಮ ಎಷ್ಟೆ ಹೇಳಿದರೂ ಪಪ್ಪ ತರೋದು ಸೀರೆನೆ. ಅದಿಕ್ಕೆ ಈ ಸಾರಿ ನಾನು ಪುಸ್ತಕ ಕೊಡೋಣ ಅಂದುಕೊಂಡಿದ್ದೆ. ಆದರೆ ಯಾವುದೇ book ಇಷ್ಟ ಆಗಲಿಲ್ಲ. ಹಿಂದಿನ ದಿನ 'ಅಂಕಿತ' ದಲ್ಲೂ ಎಲ್ಲ ಪುಸ್ತಕ ಜಾಲಾಡಿದ್ದೆ. 'ಊಹುಂ' ಹೊಸದಾಗಿ ಬಿಡುಗಡೆಯಾದ ಎಲ್ಲ books ಅಪ್ಪ ತಂದಿರ್ತಾರೆ. ನಿರಾಶೆಯಿಂದ ಪುಸ್ತಕದಂಗಡಿಯಿಂದ ಹೊರ ಬಂದವಳಿಗೆ ಮೊದಲು ಕಾಣಿಸಿದ್ದೇ ice cream. 'ಛೆ! ಎಷ್ಟು ದಿನ ಆಯ್ತಲ್ವಾ ಇಂತದೊಂದು ಮಳೆ ಬೀಳುತ್ತಿದ್ದಾಗ ice cream ತಿನ್ನುತ್ತಾ ಮಳೆ ನೋಡುತ್ತಾ enjoy ಮಾಡಿ'.  ಅಂತ ಯೋಚಿಸುತ್ತಲೇ ice cream shop ನೊಳಕ್ಕೆ ಕಾಲಿರಿಸಿದ್ದೆ. ನನ್ನ ಇಷ್ಟದ ಚೊಕಲೇಟ್ ಐಸ್ ಕ್ರೀಮ್ ತೆಗೆದುಕೊಂಡು ಹತ್ತಿರಲ್ಲೇ ಇದ್ದ ಕಂಬವೊಂದಕ್ಕೆ ಓರಗಿನಿಂತು ಐಸ್ ಕ್ರೀಮ್ ತಿನ್ನುತ್ತಾ ಸುರಿಯುವ ಮಳೆಯನ್ನು ನೋಡುತ್ತಾ ನನ್ನ ಯೋಚನೆಯಲ್ಲಿ ಮುಳುಗಿದೆ...

ಅಮ್ಮನಿಗೆ ಏನು ಗಿಫ್ಟ್ ಕೊಡಲಿ? ತಮ್ಮ ಏನು ತರಬಹುದು? ಪಪ್ಪ ಯಾವ ಕಲರ್ ಸೀರೆ ತೆಗೆದುಕೊಂಡಿದಾರೋ ಏನೋ? ಎಲ್ಲರೂ surprise ಕೊಡಕ್ಕೆ ಕಾದಿರುತ್ತಾರೆ. ಆದರೆ ನಾನು ಏನು ಕೊಡಲಿ?! ಅಮ್ಮನ್ನೇ ಕೇಳಿ ಬಿಡ್ತಿನಿ ನಿನಗೇನು ಬೇಕು ಅಂತ..! ಛೆ! ನಾನೇ ಏನಾದ್ರೂ ತೆಗೆದುಕೊಂಡು ಹೋಗಿದ್ರೆ ನಾನು surprise ಕೊಡಬಹುದಿತ್ತು....

'ಸ್ವಲ್ಪ ಒಳಗೆ ಬನ್ನಿ ಮಳೆ ನೀರು ಸಿಡಿತಾ ಇದೆ' ನನ್ನ ಹಿಂದೆ ನಿಂತ ಹುಡುಗನೊಬ್ಬ ತಣ್ಣಗಿನ ದನಿಯಲ್ಲಿ ಹೇಳಿದ. ತಿರುಗಿ ಒಮ್ಮೆ ಅವನ ಮುಖ ನೋಡಿದವಳು, 'ಪರವಾಗಿಲ್ಲ. ಇಲ್ಲೆ ಚೆನ್ನಾಗಿದೆ' ಅಂತ ಹೇಳಿ ಮತ್ತೆ ಮಳೆಯ ಕಡೆ ಮುಖ ಮಾಡಿದೆ. ನನ್ನ ಯೋಚನಾ ತಹರಿ ಮುಂದುವರೆದಿತ್ತು... ಏನು ಗಿಫ್ಟ್ ಕೊಡಲಿ?!!

ಕೈಯ್ಯಲ್ಲಿರುವ ಐಸ್ ಕ್ರೀಮ್ ಮುಗುಯುತ್ತಿದ್ದಂತೆ ನನ್ನ ಯೋಚನೆಗೂ ಕಡಿವಾಣ ಬಿತ್ತು. ಆದರೆ ಏನು ತೆಗೆದುಕೊಳ್ಳಲಿ? ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗಲೇ ಇಲ್ಲ. ಟೈಮ್ ನೋಡಿದೆ ಆಗಲೇ ಎಂಟು ಗಂಟೆ. ಧಾರಾಕಾರ ಮಳೆ... ಇನ್ನು ಆಟೋ ಹಿಡಿದು ಮನೆ ತಲುಪಲು ಮಹಾ ಸಾಹಸ ಮಾಡಬೇಕಿತ್ತು. ಮಳೆಯಲ್ಲೇ ಅಂಗಡಿಯಿಂದ ಹೊರ ಬಂದು ಆಟೋಗಾಗಿ ಹುಡುಕಾಡಿದೆ. ನನ್ನ ಅದೃಷ್ಟವೋ ಏನೋ ತಕ್ೞಣ ಒಂದು ಆಟೋ ಸಿಕ್ಕಿತು. ಹಾಗೇ ನಾನು ಆಟೋ ಹತ್ತುವ ಎರಡು ಮೂರು ನಿಮಿಷಗಳ ಮಧ್ಯೆ ಒಂದು ಘಟನೆ ಘಟಿಸಿತು. ಐಸ್ ಕ್ರೀಮ್ ತಿನ್ನುವಾಗ ನನ್ನ ಹಿಂದೆ ನಿಂತಿದ್ದ ಹುಡುಗ ಗಡಿಬಿಡಿಯಲ್ಲಿ ನನ್ನ ಹತ್ತಿರ ಬಂದು 'ಒಳಗಡೇನೆ ಬಿಟ್ಟು ಬಂದಿದ್ರಿ ಮೇಡಮ್' ಅಂತ ಒಂದು ಕವರ್ ನನ್ನ ಕೈಯ್ಯಲ್ಲಿಟ್ಟಿದ್ದ. 'ಇದು ನಂದಲ್ಲ' ಅಂತ ಹೇಳುವ ಮೊದಲೇ 'ಹುಶಾರಾಗಿ ಹೋಗಿ' ಅಂತ ಹೇಳಿ ಒಂದು ತಣ್ಣನೇಯ smile ಕೊಟ್ಟು ಆ ಮಳೆಯ ಕತ್ತೆಲೆಯಲ್ಲಿ ಲೀನವಾಗಿದ್ದ. ಆಟೋ ಹತ್ತಿ ಕುಳಿತವಳಿಗೆ ಆ ಕವರ್ ತೆಗೆದು ನೋಡುವ ವ್ಯವಧಾನ ಇರಲಿಲ್ಲ. ಬೇಗ ಮನೆ ತಲುಪಿದರೆ ಸಾಕಿತ್ತು.

ಮನೆಗೆ ಬಂದು ಊಟ ಮುಗಿದ ಮೇಲೆ 'ಛೆ, ಯಾರದೋ ಏನೋ' ಅಂತ ಅಂದುಕೊಳ್ಳುತ್ತಲೇ ಕವರ್ ಓಪನ್ ಮಾಡಿದ್ದೆ. ಒಳಗೊಂದು ಪುಟ್ಟ ಬಾಕ್ಸ್, ಅದರಲ್ಲೊಂದು ಸುಂದರವಾದ ಇಯರ್ ರಿಂಗ್! ಜೊತೆಗೊಂದು ಪುಟ್ಟ ಕಾರ್ಡ್. ಓಪನ್ ಮಾಡಿದೆ....
 'ಹಾಯ್, ಈ ಇಯರ್ ರಿಂಗ್ ನಿಮಗೆ ಚೆನ್ನಾಗಿ ಓಪ್ಪುತ್ತೆ ಅನಿಸಿತು ತೆಗೆದುಕೊಂಡೆ. ತೆಗೆದುಕೊಂಡಮೇಲೆ ಕೊಡಬೇಕು ಅನಿಸಿತು. ನಿಮಗೂ ಇಷ್ಟ ಆಗುತ್ತೆ ಅನ್ಕೋತಿನಿ. ಅಮ್ಮನಿಗೆ birthday ಗೆ ಬೆಳ್ಳಿಯ ಸಿಂಧೂರದ ಬಟ್ಟಲು ಕೊಡಿ ಖುಷಿ ಪಡ್ತಾರೆ. ಅವರಿಗೆ ನೀವು ಅಂದರೆ ತುಂಬಾ ಇಷ್ಟ ಅನಿಸುತ್ತೆ!' ಅಂತ ಬರೆದಿತ್ತು.
ಷಾಕ್ ಆಯಿತು..!
ತಣ್ಣಗಿನ smile ಮಾಡಿ ಹೋದ ಹುಡುಗನ ಮುಖ ಜ್ಞಾಪಕಕ್ಕೆ ಬಂತು. ಅವನಿಗೆ ಹೇಗೆ ತಿಳಿಯಿತು ನಮ್ಮಮ್ಮನ birthday ಅಂತ?! ಓ! ಬುಕ್ ಸ್ಟಾಲ್ ಇಂದ ಹೊರಗಡೆ ಬರುತ್ತಿದ್ದಂತೆ ನನ್ನ ಪ್ರೆಂಡ್ ಜೊತೆ ಮಾತನಾಡಿದ್ದೆ... ಹಾಗಿದ್ದರೆ ಅವ್ನು ನನ್ನ ಹಿಂಬಾಲಿಸ್ತಾ ಇದ್ನಾ? ಛೆ, ಎಂತವರೆಲ್ಲ ಇರ್ತಾರಪ್ಪ ಅಂತ ಅಂದುಕೊಳ್ತಾನೇ ಆ ವಿಷಯ ಅಲ್ಲಿಗೆ ಬಿಟ್ಟೆ. ಆದರೆ ಮಾರನೆ ದಿನ ನಾನು ಅಮ್ಮನಿಗೆ ಅಂತ ತೆಗೆದುಕೊಂಡುದ್ದು ಮಾತ್ರ 'ಬೆಳ್ಳಿಯ ಸಿಂಧೂರದ ಬಟ್ಟಲು!'

ಅಂದು ಅಮ್ಮನ ಹುಟ್ಟಿದ ದಿನ. ಕೊನೆಯದಾಗಿ ನಾನು ವಿಷ್ ಮಾಡಿ ಗಿಫ್ಟ್ ಕೊಟ್ಟೆ. ಅಮ್ಮ ಖುಷಿಯಿಂದ ನನ್ನ ತಬ್ಬಿದ್ದರು. ಅವರ ಕಣ್ಣು ತುಂಬಿ ಬಂದಿತ್ತು. 'ಎಷ್ಟೊಂದು ಅಮೂಲ್ಯವಾದ ಉಡುಗೋರೆ ಕೊಟ್ಟೆ ಮಗಳೆ ' ಅಂತ ಅಪ್ಪ ಹೊಗಳಿದ್ದರು. ನನಗೆಂತಹುದೋ ಸಮಾಧಾನ..!

ಇಂದು ಸುಮ್ಮನೇ ಕುಳಿತು ಇದನ್ನೆಲ್ಲ ನೆನಪಿಸಿಕೊಳ್ತಾ ಇದಿನಿ. ಅವತ್ತು ಅಮ್ಮ ಅಷ್ಟು ಖುಷಿ ಪಡಕ್ಕೆ ನಾನು ಕಾರಣಾನಾ? ಆ ಹುಡುಗನಾ? ನಿಜವಾಗಲೂ ಅವ್ನು ಯಾರು? ಯಾಕೆ ಬಂದ? ಊಹೂಂ ಗೊತ್ತಿಲ್ಲ. ಅಮ್ಮನ ಹುಟ್ಟಿದ ದಿನದ ಖುಷಿಗೆ ಒಂದು ರೀತಿಯಲ್ಲಿ ಅವ್ನೂ ಕಾರಣ!! ತಕ್ೞಣ ಅವನು ಕೊಟ್ಟ ಆ ಇಯರ್ ರಿಂಗ್ ನೆನಪಾಯ್ತು. ಇವತ್ತು ಹಾಕಿಗೋ ವೈಟ್ ಡ್ರೆಸ್ ಗೆ ಅದು ಒಪ್ಪುತ್ತೆ ಅನಿಸಿತು ಹಾಕಿಕೊಂಡೆ...!
'ಯಾವುದೇ ಇದು ಹೊಸ ಇಯರ್ ರಿಂಗ್? ಚೆನ್ನಾಗಿದೆ. ನಿನ್ಗೆ ತುಂಬಾ ಚೆನ್ನಾಗಿ ಕಾಣತ್ತೆ. ನೀನೆ ತಗೊಂಡ್ಯೋ, ಯಾರಾದರೂ ಗಿಫ್ಟ್ ಮಾಡಿದ್ರೋ?' ಅಂತ ನನ್ನ ಗೆಳತಿಯೊಬ್ಬಳ್ಳು ತುಂಟ ನಗು ನಗುತ್ತಾ ಇದ್ಲು. ಏನಂತ ಹೇಳಲಿ ಅವಳಿಗೆ? ತಕ್ೞಣ ಒಂದು ಹಾಡು ಜ್ಞಾಪಕಕ್ಕೆ ಬಂತು. 'ಒಂದೆ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ ಮುಂದ ಮುಂದ ಮುಂದಕ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ...'  ಆ ಹುಡುಗನ ಮುಖ ನನ್ನ ಕಣ್ಣ ಮುಂದೆ ತೇಲಿ ಹೋಯಿತು....